ಬಾಲಿವುಡ್ (Bollywood) ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದಾರೆ (Death). ಸತೀಶ್ ಗೆ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ತಕ್ಷಣವೇ ಅವರನ್ನು ದೆಹಲಿಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಇದೀಗ ಈ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ಸ್ಥಳದಲ್ಲಿ ಔಷಧಿ ಸಿಕ್ಕಿದೆ ಎಂದು ಗೊತ್ತಾಗಿದೆ.
ಸತೀಶ್ ಸಾವಿನ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರಂತೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ
ಸತೀಶ್ ನಿಧನದ ಸುದ್ದಿಯನ್ನು ಖ್ಯಾತ ನಟ ಅನುಪಮ್ ಖೇರ್ ಟ್ವೀಟ್ ಮಾಡಿ, ಸಂತಾಪವನ್ನು ವ್ಯಕ್ತ ಪಡಿಸಿದ್ದರು. ಅವರೊಂದಿಗೆ ಕೆಲಸ ಮಾಡಿದ್ದನ್ನೂ ನೆನಪಿಸಿಕೊಂಡಿದ್ದರು. ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರಲ್ಲಿ ನಟಿಸಿದ್ದಾರೆ.
ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸತೀಶ್, ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದರು. ಅಲ್ಲದೇ, ಖ್ಯಾತ ನಟರ ಜೊತೆ ತೆರೆಹಂಚಿಕೊಂಡಿದ್ದು ವಿಶೇಷ. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಲವರು ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಸತೀಶ್ ಸಾವು ಅನುಮಾನಕ್ಕೆ ಕಾರಣವಾಗಿದೆ ಎಂದು ಸುದ್ದಿಯಾಗಿದೆ.