ಬೆಂಗಳೂರು: ರೌಡಿಶೀಟರ್ ಓರ್ವನ ಪತ್ನಿ ಮೇಲೆ ಆಸ್ತಿಗಾಗಿ ನಾದಿನಿ ಹಾಗೂ ಮೈದುನ ಹಲ್ಲೆ ಮಾಡಿ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಬೆಂಗಳೂರು ಬಾಣಸವಾಡಿಯಲ್ಲಿ ನಡೆದಿದೆ.
ಕಮ್ಮನಹಳ್ಳಿಯ ನಿವಾಸಿ ಪ್ರೇಮಾವತಿ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ರೌಡಿಶೀಟರ್ ಶಿವು ಹೃದಯಾಘಾತದಿಂದ ಮೃತಪಟ್ಟಿದ್ದನು. ಆದ್ರೆ ಇದು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿದ ಪತ್ನಿ, ಪತಿಯ ಸಾವಿನ ತನಿಖೆ ಕೋರಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಪ್ರೇಮಾವತಿಯ ಮೈದುನ ಹಾಗೂ ನಾದಿನಿ ಬುಧವಾರ ರಾತ್ರಿ ವೇಳೆ ಏಕಾಏಕಿ ದಾಳಿ ಮಾಡಿ ಹಿಗ್ಗಾಮುಗ್ಗ ಹೊಡೆದಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮಾವತಿ, ಆಸ್ತಿಯ ವಿಚಾರವಾಗಿ ನಾದಿನಿ ಪರಿಮಳ ಹಾಗೂ ಪತಿಯ ಕುಟುಂಬ ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ನಾದಿನಿ ಪರಿಮಳ ಮಗಳು ಮೋನಿಷಾ ಹಾಗೂ ಮೈದುನಾ ಸತೀಶ್ ಮೇಲೆ ಪ್ರೇಮಾವತಿ ದೂರು ನೀಡಿದ್ದು, ಬಾಣಸವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.