ಚಿತ್ರದುರ್ಗ: ಇಂದು ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಿಂಗೆರೆ ಗ್ರಾಮದ ಕೆರೆಯಂಗಳದಲ್ಲಿ ನಲೆಸಿರೋ ಜನರ ಮನೆಗಳು ತೀವ್ರ ಮಳೆಯಿಂದಾಗಿ ಜಲಾವೃತವಾಗಿರೋ ಪರಿಣಾಮ ಜನರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಸುಮಾರು 30ಕ್ಕೂ ಹೆಚ್ಚಿನ ಕುಟುಂಬಗಳು ಇಲ್ಲಿ ನೆಲೆಸಿದ್ದು, ಮನೆಗಳಿಗೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಮನೆಯಲ್ಲಿನ ದವಸ, ಧಾನ್ಯಗಳು ನೀರು ಪಾಲಾಗಿದೆ. ಹೀಗಾಗಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ, ವಯಸ್ಸಾದ ವೃದ್ದರು ಸಹ ಕಳೆದ ಮೂರು ದಿನಗಳಿಂದ ಮೊಣಕಾಲು ಮಟ್ಟ ನಿಂತಿರೋ ನೀರಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಈವರೆಗೆ ಯಾವ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಧಾವಿಸಿ, ಇವರ ಅಳಲನ್ನು ಆಲಿಸದಿರುವುದು ಜನಾಕ್ರೋಶಕ್ಕೆ ಗುರಿಯಾಗಿದೆ. ಇದನ್ನೂ ಓದಿ: ರೈಲ್ವೆ ಉದ್ಯೋಗ ಕೊಡಿಸುವುದಾಗಿ ವಂಚನೆ – ನಾಲ್ವರು ಆರೋಪಿಗಳು ಅರೆಸ್ಟ್
ಸತತ 30 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದ, ಅಗತ್ಯ ದಾಖಲೆಗಳೆಲ್ಲಾ ಇದ್ದರು ಸಹ ಸರ್ಕಾರದಿಂದ ನೀಡುವ ಮನೆಭಾಗ್ಯ ನಮಗೆ ಸಿಕ್ಕಿಲ್ಲ. ನಾವು ಕೇವಲ ವೋಟಿಗೆ ಮಾತ್ರ ಸೀಮಿತವಾಗಿದ್ದೇವೆಂದು ಚಳ್ಳಕೆರೆ ಶಾಸಕ ರಘುಮೂರ್ತಿ ವಿರುದ್ಧ ಸಂಕಷ್ಟಕ್ಕೆ ಸಿಲುಕಿರೋ ಗ್ರಾಮಸ್ಥರು ಕಿಡಿಕಾರಿದ್ದಾರೆ.