ಮಂಗಳೂರು: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಿದ್ದರಿಂದ ಸೇತುವೆಯೊಂದು ಕುಸಿದು ಬಿದ್ದಿದ್ದು, ಭಾರೀ ಅನಾಹುತ ತಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಮೂಲರಪಟ್ನದಲ್ಲಿ ನಡೆದಿದೆ.
ಮೂಲರಪಟ್ನ ಸಮೀಪದ ಫಲ್ಗುಣಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಬಂಟ್ವಾಳ-ಕುಪ್ಪೆಪದವು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತಿತ್ತು. ಈ ಸೇತುವೆ ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ನೀರು ಇಲ್ಲದಿದ್ದಾಗ ಸೇತುವೆ ಕೆಳಗೆ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿತ್ತು. ಅದೃಷ್ಟವಶಾತ್ ಸೇತುವೆ ಕುಸಿತದ ವೇಳೆ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಹೀಗಾಗಿ ಭಾರೀ ಪ್ರಮಾಣದ ಅನಾಹುತ ತಪ್ಪಿದೆ.
ಸ್ಥಳೀಯರು ಸೇತುವೆ ದುರಸ್ತಿ ಮಾಡಿಸುವಂತೆ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು. ಹಲವು ಬಾರಿ ಅಕ್ರಮ ಮರಳು ಸಾಗಣಿಕೆಗೆ ಕಡಿವಾಣ ಹಾಕಿದ್ದರೂ ರಾಜಕೀಯ ಪ್ರಭಾವ ಬಳಸಿ ಮತ್ತೇ ಪ್ರಾರಂಭಿಸಲಾಗುತ್ತಿತ್ತು. ಸೇತುವೆ ಕುಸಿದು ಬೀಳಲು ಅಕ್ರಮ ಮರಳುಗಾರಿಕೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಸೇರಿದಂತೆ ಮಾಜಿ ಸಚಿವ ರಮಾನಾಥ್ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.