ಹಾವೇರಿ: ಬೇಕರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ, 500 ರೂ. ಖೋಟಾ ನೋಟು ಚಲಾವಣೆಗೆ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿ ದಾವಣಗೆರೆ ಮೂಲದವನು ಎಂದು ಗುರುತಿಸಲಾಗಿದೆ. ಬೇಕರಿ, ಕಿರಾಣಿ ಅಂಗಡಿಗಳಲ್ಲಿ ಇಪ್ಪತ್ತು, ಮೂವತ್ತು ರೂ.ಗಳ ವಸ್ತುಗಳನ್ನು ಖರೀದಿಸಿ, 500 ರೂ. ಮುಖಬೆಲೆಯ ಖೋಟಾನೋಟು ಕೊಟ್ಟು ಅಂಗಡಿಯ ಮಾಲೀಕರನ್ನು ಯಾಮಾರಿಸುತ್ತಿದ್ದ ಎನ್ನಲಾಗಿದೆ.
ಎರಡು ಅಂಗಡಿಗಳಲ್ಲಿ ಐನೂರು ರೂಪಾಯಿ ಖೋಟಾನೋಟು ನೀಡಿ ಚಿಲ್ಲರೆ ಪಡೆದುಕೊಂಡು ಹೋಗಿದ್ದ. ನಂತರ ನೋಟು ನೋಡಿ ಸಂಶಯಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಆರೋಪಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂಗಡಿಗೆ ಬಂದು ನೋಟು ನೀಡಿ, ವಸ್ತು ಖರೀದಿಸುವ ದೃಶ್ಯ ಸೆರೆಯಾಗಿದೆ.
ಸ್ಥಳೀಯರು ಕೇಳಿದರೆ ಹೆಸರು ಬಾಯ್ಬಿಟ್ಟಿಲ್ಲ, ಕೇವಲ ದಾವಣಗೆರೆ ಜಿಲ್ಲೆಯವನು ಎಂದು ಹೇಳುತ್ತಿದ್ದಾನೆ. ಸವಣೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.