ಕೋಲಾರ: ಮಾಟ-ಮಂತ್ರ ಮಾಡಿಸುವ ನೆಪದಲ್ಲಿ ಹಣ ದೋಚಲು ಯತ್ನಿಸಿದ್ದ ಮಂತ್ರವಾದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ಮೂಲದ ನೀಲಾದ್ರಿ ಬಂಧಿತ ಮಂತ್ರವಾದಿ. ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ರಾಘವೇಂದ್ರ ಎಂಬವರು ಮಂತ್ರವಾದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿಮ್ಮ ಮನೆಯಲ್ಲಿ ಸಮಸ್ಯೆಯಿದೆ, ಪೂಜೆ ಮಾಡಿಸಬೇಕು ಎಂದು ಮಂತ್ರವಾದಿ ನೀಲಾದ್ರಿ, ರಾಘವೇಂದ್ರ ಅವರಿಗೆ ಭಯ ಮೂಡಿಸಿದ್ದ. ಇದರಿಂದಾಗಿ ರಾಘವೇಂದ್ರ ಅವರು ಪೂಜೆ ಮಾಡಿಸಲು ಒಪ್ಪಿದ್ದರು. ಈ ಮೂಲಕ ನೀಲಾದ್ರಿ ಮನೆಗೆ ಬಂದು 40,000 ರೂ. ದೋಚಲು ಯತ್ನಿಸಿದ್ದ.
ನೀಲಾದ್ರಿ ನಡೆಯಿಂದ ಅನುಮಾನ ವ್ಯಕ್ತಪಡಿಸಿದ ರಾಘವೇಂದ್ರ ಹಾಗೂ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ತಕ್ಷಣವೇ ಗ್ರಾಮಕ್ಕೆ ಆಗಮಿಸಿದ ಪೊಲೀಸರು ನೀಲಾದ್ರಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.