ಮೈಸೂರು: ಪೊಲೀಸ್ ಇನ್ಸ್ಪೆಕ್ಟರ್ ಗೆ ದೋಖಾ ಮಾಡಲು ಯತ್ನಿಸಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿಲೀಪ್ ಬಂಧಿತ ನಕಲಿ ಐಪಿಎಸ್ ಆಗಿದ್ದು, ಮೈಸೂರಿನ ವಿಜಯನಗರ ನಿವಾಸಿಯಾಗಿದ್ದಾನೆ. ಈತ ಮೈಸೂರಿನ ಕೆ.ಆರ್.ಠಾಣೆ ಇನ್ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಅವರನ್ನು ಯಾಮಾರಿಸಲು ಮುಂದಾಗಿದ್ದನು.
ನಾನು ಐಪಿಎಸ್ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಂಡಿದ್ದ ದಿಲೀಪ್, ತನ್ನ ಕುಟುಂಬಸ್ಥರ ಪ್ರವಾಸಕ್ಕೆ ಇನ್ನೋವಾ ಕಾರು ವ್ಯವಸ್ಥೆ ಮಾಡಿ ಎಂದು ಹೇಳಿದ್ದನು. ಅಲ್ಲದೆ ಕಾರು ಬಾಡಿಗೆ ಮೊತ್ತ ಮತ್ತು ಚಾಲಕನ ಕೂಲಿ ನೀವೇ ನೀಡಿ ಎಂದು ಹೇಳಿದ್ದಾನೆ. ದಿಲೀಪ್ ಮಾತಿನಿಂದ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಆತ ನಕಲಿ ಐಪಿಎಸ್ ಅಧಿಕಾರಿ ಎಂದು ಸಾಬೀತಾಗಿದೆ.
ಐಪಿಎಸ್ ಆಯ್ಕೆಪಟ್ಟಿಯನ್ನ ಡೌನ್ ಲೋಡ್ ಮಾಡಿ, ಅದರಲ್ಲಿ ತನ್ನ ಹೆಸರು ಸೇರಿಸಿಕೊಂಡಿದ್ದ ಈತ ಖತರ್ನಾಕ್ ಆಸಾಮಿಯಾಗಿದ್ದಾನೆ. ನಕಲಿ ಐಪಿಎಸ್ ಎಂದು ತಿಳಿದ ತಕ್ಷಣವೇ ದಿಲೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.