ಶಿವಮೊಗ್ಗ: ಫೇಕ್ ಅಕೌಂಟ್ನ (Fake Account) ಹಾವಳಿ ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೂ ತಟ್ಟಿದೆ. ಸಚಿವರ ಹೆಸರಿನಲ್ಲಿ ಫೇಸ್ಬುಕ್ (Facebook) ಗ್ರೂಪ್ ಕ್ರಿಯೇಟ್ ಮಾಡಲಾಗಿದ್ದು, ಅದರಲ್ಲಿ ಸಚಿವರ ಹಾಗೂ ಸಚಿವರ ಪಕ್ಷಕ್ಕೆ ವಿರುದ್ಧವಾದ ಫೋಸ್ಟ್ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಸಂಬಂಧ ಐಟಿ ಆ್ಯಕ್ಟ್ ಅಡಿಯಲ್ಲಿ ಕೇಸ್ ಸಹ ದಾಖಲಾಗಿದೆ. ಸಚಿವ ಮಧು ಬಂಗಾರಪ್ಪ ಅವರ ಫೇಸ್ಬುಕ್ ಐಡಿ ಕ್ರಿಯೇಟ್ ಪ್ರಕರಣ ಸಂಬಂಧ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿಡಿ ಮಂಜುನಾಥ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಫೇಸ್ಬುಕ್ ಗ್ರೂಪ್ ಡಿಪಿಯಲ್ಲಿ ಮಧು ಬಂಗಾರಪ್ಪ ಅವರ ಫೋಟೋ ಹಾಕಿದ್ದು, ಇದರಲ್ಲಿ 58 ಸಾವಿರ ಫಾಲೋವರ್ಸ್ ಇದ್ದಾರೆ. ಈ ಫೇಸ್ಬುಕ್ ಗ್ರೂಪ್ನಲ್ಲಿ ಕುಂದಾಪುರ ವಿರಾಟ್ ಎಂಬ ಹೆಸರಿನ ಫೇಸ್ಬುಕ್ ಬಳಕೆದಾರರು ‘ಅಚ್ಚೇ ದಿನ್’ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾದ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಜನತಾ ದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ – ದಿನವಿಡೀ ದೂರು ದುಮ್ಮಾನ ಆಲಿಸಿದ ಸಿದ್ದರಾಮಯ್ಯ
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಸ್ಟ್ನಲ್ಲಿ ‘ಯೇ ಹೈ ಅಚ್ಚೇ ದಿನ್, ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್ನ ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ರು, ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ’ ಎಂದು ಬರೆದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇರುವ ಫೋಟೋ ಹಾಕಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್ಗಳನ್ನು ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಎಂಬ ಫೇಸ್ಬುಕ್ ಗ್ರೂಪ್ಗೆ ಟ್ಯಾಗ್ ಮಾಡಲಾಗಿದೆ ಎಂದು ದೂರಲಾಗಿದೆ. ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಈ ಸಂಬಂಧ ನಕಲಿ ಅಕೌಂಟ್ ಕ್ರಿಯೇಟ್ ಮಾಡಿದ ಆರೋಪ ಸೇರಿದಂತೆ ಮಧು ಬಂಗಾರಪ್ಪ ಅವರಂತೆ ನಟಿಸಿ ಸಚಿವರೇ ಈ ರೀತಿ ಫೇಸ್ಬುಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್ಗಳನ್ನು ಹಾಕುತ್ತಿರುವಂತೆ ಮಾಡುವ ಮೂಲಕ ಸಚಿವರಿಗೆ ಕೆಟ್ಟ ಹೆಸರು ಬರುವಂತೆ, ಅವರ ಘನತೆಗೆ ಧಕ್ಕೆ ತರುವಂತೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ: ದುಬೈ ಪ್ರಯಾಣಕ್ಕೆ ಡಿಕೆಶಿಗೆ ಕೋರ್ಟ್ ಅನುಮತಿ