ಕಲಬುರಗಿ: ವೈದ್ಯ ನಾರಾಯಣೋ ಹರಿ ಅಂತ ವೈದ್ಯರನ್ನು ನಮ್ಮ ಪೂರ್ವಜರು ದೇವರಿಗೆ ಹೋಲಿಸಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯ ನಕಲಿ ವೈದ್ಯರು ಅಲ್ಲಿನ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ದುರಂತ ಅಂದ್ರೆ ಇದರಲ್ಲಿ ಕೆಲ ವೈದ್ಯರು ಎಸ್ಎಸ್ಎಲ್ಸಿ ಸಹ ತೇರ್ಗಡೆಯಾಗಿಲ್ಲ.
ಹೌದು. ಕಲಬುರಗಿ ಜಿಲ್ಲೆಯಲ್ಲಿ ಸದ್ಯ ನಕಲಿ ವೈದ್ಯರ ಆಸ್ಪತ್ರೆಗಳು ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ವಿಪರೀತವಾಗಿ ತೆಗೆದಿದ್ದಾರೆ. ಇನ್ನೂ ಹೀಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲ ನಕಲಿ ವೈದ್ಯರು ನೆಟ್ಟಗೆ ಎಸ್ಎಸ್ಎಲ್ಸಿ ಸಹ ತೇರ್ಗಡೆಯಾಗಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಡಾಕ್ಟರ್ ಅಂತ ಬೋರ್ಡ್ ಹಾಕಿಕೊಂಡು ಮುಗ್ಧ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಈ ನಕಲಿ ವೈದ್ಯರು ನೀಡಿದ ಔಷಧಿಯಿಂದ ಹಲವು ರೋಗಿಗಳು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಹೀಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ನಕಲಿ ವೈದ್ಯರೆಲ್ಲ ಕೆಲ ತಿಂಗಳುಗಳ ಕಾಲ ನುರಿತ ವೈದ್ಯರ ಬಳಿ ಕೆಲಸಕ್ಕೆ ಸೇರಿಕೊಂಡು, ನಂತರದ ದಿನಗಳಲ್ಲಿ ಅವರೇ ವೈದ್ಯರಂತೆ ಗ್ರಾಮೀಣ ಭಾಗದಲ್ಲಿ ಬೋರ್ಡ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ.
ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ)ಯಡಿ ಒಟ್ಟು 761 ಆಸ್ಪತ್ರೆಗಳು ಮಾತ್ರ ನೋಂದಣಿಯಾಗಿವೆ. ಆದರೆ ಸದ್ಯ ಕಲಬುರಗಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ನಕಲಿ ವೈದ್ಯರು ಆಸ್ಪತ್ರೆಗಳನ್ನು ನಡೆಸಿದ್ದಾರೆ. ಈ ಹಿಂದೆ ಜಿಲ್ಲಾ ಆರೋಗ್ಯಧಿಕಾರಿಗಳು ದಾಳಿ ನಡೆಸಿ ಹಲವು ಆಸ್ಪತ್ರೆಗಳನ್ನು ಬಂದ್ ಮಾಡಿದ್ದಾರೆ. ಆದರೆ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳ ಬದಲಿಸಿ ಮತ್ತೆ ಆಸ್ಪತ್ರೆಗಳನ್ನು ತೆಗೆದಿದ್ದಾರೆ. ಈ ಕುರಿತು ಡಿಎಚ್ಓ ಅವರನ್ನ ಕೇಳಿದರೆ ನಕಲಿ ವೈದ್ಯರ ವಿರುದ್ಧ ಮತ್ತೆ ಜರುಗಿಸುವುದಾಗಿ ಹೇಳುತ್ತಿದ್ದಾರೆ.
ದುರಂತ ಅಂದರೆ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ರಾಜ್ಯಕ್ಕೆ ಹೆಚ್ಚು ವೈದ್ಯ ಶಾಸಕರನ್ನು ನೀಡಿದ, ಕಲಬುರಗಿ ಜಿಲ್ಲೆಯಲ್ಲಿಯೇ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿರುವುದು ನಿಜಕ್ಕೂ ದುರಂತವೇ ಸರಿ.