ಚಿಕ್ಕಬಳ್ಳಾಪುರ/ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕಲು ಆರೋಗ್ಯ ಸಚಿವ ರಮೇಶ್ ಕುಮಾರ್ ನಡೆಸಿದ್ದ ಕಸರತ್ತು ಅಷ್ಟಿಷ್ಟಲ್ಲ. ಆದ್ರೆ ಆರೋಗ್ಯ ಸಚಿವರಿಗೆ ರಾಜ್ಯದಲ್ಲಿ ಅಮಾಯಕರನ್ನು ಬಲಿ ಪಡೀತಿರುವ ನಕಲಿ ವೈದ್ಯರ ಬಗ್ಗೆ ಮಾಹಿತಿನೇ ಇಲ್ಲ ಅನ್ನಿಸುತ್ತದೆ.
ಯಾಕಂದ್ರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಪುರಸಭೆ ಮುಂಭಾಗವೇ ಆಂಧ್ರ ಮೂಲದ ಇ.ಎನ್.ರೆಡ್ಡಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಮೈಕೈ ನೋವು ಅಂತಾ ಆಸ್ಪತ್ರೆಗೆ ಬರೋರಿಗೆಲ್ಲಾ ಗ್ಲುಕೋಸ್ ಹಾಕುತ್ತಿದ್ದ. ಈತನಿಂದ ಗ್ಲುಕೋಸ್ ಹಾಕಿಸಿಕೊಂಡಿದ್ದ ರೋಗಿ ವಾಂತಿ ಮಾಡ್ಕೊಂಡಿದ್ರಿಂದ ಕ್ಲಿನಿಕ್ ನಿಂದಲೇ ಹೊರಹಾಕಿದ್ದನು.
ಇನ್ನು 10 ದಿನಗಳ ಹಿಂದೆಯಷ್ಟೇ ಇನಾಯತ್ ಉಲ್ಲಾ ಅನ್ನೋ ನಕಲಿ ವೈದ್ಯನ ಬಳಿ ಹೋಗಿದ್ದ ನರಸಪ್ಪ ಅನ್ನೋರು ಮೃತಪಟ್ಟಿದ್ರು. ಖಾಸಗಿ ವೈದ್ಯರ ಮುಷ್ಕರದ ವೇಳೆ ಮೈಸೂರಲ್ಲಿ ಡಿಗ್ರಿ ವಿದ್ಯಾರ್ಥಿನಿಯೊಬ್ಬಳು ನಕಲಿ ವೈದ್ಯ ಕೊಟ್ಟಿದ್ದ ಇಂಜೆಕ್ಷನ್ ಗೆ ಬಲಿಯಾಗಿದ್ದಳು. ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುತ್ತಿರೋ ಆರೋಗ್ಯ ಸಚಿವರು ನಕಲಿ ವೈದ್ಯರನ್ನು ಮಟ್ಟ ಹಾಕೋದು ಯಾವಾಗ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಕಲಿ ವೈದ್ಯ ಬಂಧನ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಕಲಿ ವೈದ್ಯನೊಬ್ಬನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. 31 ವರ್ಷದ ಬಸವರಾಜ್ ಬಂಧಿತ ನಕಲಿ ವೈದ್ಯ. ರಾತ್ರಿ ಅನುಮಾನಸ್ಪದವಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಬಸವರಾಜ್ ತಿರುಗಾಡುತ್ತಿದ್ದನು. ಕಿಮ್ಸ್ ಭದ್ರತಾ ಸಿಬ್ಬಂದಿ ವಿಚಾರಿಸಿದಾಗ ನಕಲಿ ವೈದ್ಯ ಅನ್ನೋದು ಗೊತ್ತಾಗಿದೆ. ಬಸವರಾಜನ ಅಜ್ಜ ನರಗುಂದ ತಾಲೂಕಿನ ಕೊಣ್ಣೂರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ರು. ಅವರ ಸಮವಸ್ತ್ರವನ್ನು ಧರಿಸಿ ಕಿಮ್ಸ್ ಗೆ ಬಂದ್ದಿದ್ದ ಎಂದು ತಿಳಿದುಬಂದಿದೆ.