ರಾಯಚೂರು: ನಕಲಿ ಹತ್ತಿ ಬೀಜ ಮಾರಾಟ ಜಾಲವನ್ನ ರಾಯಚೂರಿನ ಕ್ರೈಂ ಬ್ರ್ಯಾಂಚ್ ಹಾಗೂ ಮಾನ್ವಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆಂಧ್ರಪ್ರದೇಶದಲ್ಲಿ ತಯಾರಾಗುವ ಕಾವ್ಯ ಹೆಸರಿನ ನಕಲಿ ಹತ್ತಿ ಬೀಜವನ್ನ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಮಾನ್ವಿಯ ಕಲಂಗೇರಾ ಗ್ರಾಮದ ಅಶೋಕ್ ಹಾಗೂ ಭೀಮಣ್ಣ ಬಂಧಿತ ಆರೋಪಿಗಳು. 4 ಲಕ್ಷ 73 ಸಾವಿರ ರೂಪಾಯಿ ಮೌಲ್ಯದ ಒಟ್ಟು 520 ಪ್ಯಾಕೇಟ್ಗಳನ್ನ ಮಾರಾಟ ಮಾಡಿದ್ದ ಆರೋಪಿಗಳಿಂದ 1 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.
ಆಂಧ್ರಪ್ರದೇಶದ ನಂದ್ಯಾಲ ಮೂಲದ ರಹಿಮಾನ್ ಎಂಬವನಿಂದ ಕಮಿಷನ್ ಆಧಾರದ ಮೇಲೆ ಇಬ್ಬರು ಆರೋಪಿಗಳು ನಕಲಿ ಬೀಜ ಮಾರಾಟ ಮಾಡುತ್ತಿದ್ದರು. ಆದ್ರೆ ಕಡಿಮೆ ಬೆಲೆಯ ಆಸೆ ಹಾಗೂ ಸುಳ್ಳು ಭರವಸೆಗಳಿಂದಾಗಿ ಸಿಕ್ಕ ಬೀಜಗಳನ್ನ ಕೊಂಡು ಬಿತ್ತನೆ ಮಾಡುವ ರೈತರು ಈಗ ಆತಂಕಕ್ಕೊಳಗಾಗಿದ್ದಾರೆ.
ಪೊಲೀಸರ ದಾಳಿ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದ್ದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.