ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಬ್ಲಾಸ್ಟ್ ಪ್ರಕರಣದ ಬೆನ್ನಲ್ಲೇ ಇದೀಗ ಕದಂಬ ಹೋಟೆಲ್ಗೆ (Kadamba Hotel) ಬಾಂಬ್ ಬೆದರಿಕೆ ಹಾಕಿರುವ ಪತ್ರವೊಂದು ದೊರೆತಿದೆ.
ಹೆಚ್ ಎಂ ಟಿ ಗ್ರೌಂಡ್ ಬಳಿ ಇರುವ ಕದಂಬ ಹೋಟೆಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಜಾಲಹಳ್ಳಿ ಪೊಲೀಸ್ ಸ್ಟೇಷನ್ ಗೆ ಅನಾಮಧೇಯ ಪತ್ರ ಬಂದಿದೆ. ಕೂಡಲೇ ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಂಬ್ ಸ್ಕ್ವಾಡ್, ಶ್ವಾನ ದಳಗಳಿಂದ ಪರಿಶೀಲನೆ ನಡೆಸಿದ್ದಾರೆ.
ಈ ಪತ್ರ ಪೋಸ್ಟ್ ಆಫೀಸ್ ಮೂಲಕ ಬಂದಿದ್ದು, ಅರ್ಧ ಗಂಟೆ ಮುಂಚಿತವಾಗಿ ಜಾಲಹಳ್ಳಿ ಪೊಲೀಸರು ಸ್ವೀಕರಿಸಿದ್ದರು. ಪತ್ರವು ಒಂದು ಪೇಜ್ ಇದ್ದು, ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಬಯಲಾಗಿದೆ.
ಎಲ್ಲ ಪರಿಶೀಲನೆ ಮಾಡಲಾಗಿದೆ. ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಇರೋದು ಪತ್ತೆ ಆಗಿಲ್ಲ. ಎಲ್ಲಾ ಪರಿಶೀಲನೆ ಮಾಡಲಾಗಿದ್ದು ಮತ್ತೊಮ್ಮೆ ಬಾಂಬ್ ಸ್ಕ್ವಾಡ್ ತಂಡದಿಂದ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಪತ್ರದಲ್ಲಿ ಏನಿದೆ..?: ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೊಲೀಸರಿಗೆ ಬೈದಿರುವ ಅನಾಮಿಕ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಿದ್ದು ನಾನೇ. ಈಗ ಈ ಹೊಟೇಲ್ನಲ್ಲಿ ಬಾಂಬ್ ಇಟ್ಟಿರುವುದು ಕೂಡ ನಾನೇ ಎಂದು ಹೇಳಿದ್ದಾನೆ. ಇದನ್ನೂ ಓದಿ: West Bengal: 2016 ನೇಮಕಾತಿ ರದ್ದುಗೊಳಿಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ
ಬೆಚ್ಚಿ ಬಿದ್ದ ಜನ: ಕದಂಬ ಹೋಟೆಲ್ನಲ್ಲಿ ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ವೇಳೆ ಏಕಾಏಕಿ ಶ್ವಾನದಳದೊಂದಿಗೆ ಎಂಟ್ರಿ ಕೊಟ್ಟ ಪೊಲೀಸರು ಬಾಂಬ್ ಇದೆ ಎಂದು ಹೇಳಿದ್ದಾರೆ. ಇದರಿಂದ ಭಯಭೀತರಾದ ಜನ ಹೋಟ್ನಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಸೀಮಂತ ಕಾರ್ಯಕ್ರಮ ಇತ್ತು ತುಂಬಾ ಖುಷಿಯಾಗಿದ್ದೆ. ಪೊಲೀಸರು ಬಂದು ಬಾಂಬ್ ಇದೆ ಅಂತ ಹೇಳಿದ್ರು ಭಯ ಆಯ್ತು. ಎಲ್ಲಾ ಹೊರಗಡೆ ಬಂದ್ವಿ ಇದರಿಂದ ತುಂಬಾ ಬೇಜಾರಾಗಿದೆ. ಕಾರ್ಯಕ್ರಮ ಮಾಡಿಕೊಳ್ಳಲು ಖುಷಿ ಇತ್ತು. ಆದರೆ ಎಂಜಾಯ್ ಮಾಡಲು ಆಗಲಿಲ್ಲ ತುಂಬಾ ಬೇಜಾರಾಗಿದೆ ಎಂದು ಸೀಮಂತ ಮಾಡಿಕೊಳ್ಳುವ ಹೆಣ್ಮಗಳು ಬೇಸರ ವ್ಯಕ್ತಪಡಿಸಿದ್ದಾರೆ.