ಬೆಂಗಳೂರು: ಪ್ರಖ್ಯಾತ ಕುದೂರಮ್ಮ ದೇವಿಯ ಜಾತ್ರ ಮಹೋತ್ಸವದಲ್ಲಿ ಭಕ್ತರು ಅಗ್ನಿಕೊಂಡ ಹಾದು ಹೋಗುವಾಗ, ಹರಕೆ ಹೊತ್ತಿದ್ದ ಭಕ್ತರು ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಕುದೂರಿನಲ್ಲಿ ನಡೆದಿದೆ.
ಸ್ಥಳೀಯ ರಮೇಶ್ ಕಾಲು ಎಡವಿ ಬಿದ್ದು ಬೆಂಕಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಮಾಗಡಿ ತಾಲೂಕಿನ ಕುದೂರಿನಲ್ಲಿ ಈ ಕುದೂರಮ್ಮ ದೇವಿಯ ಜಾತ್ರೆ ಅನಾದಿ ಕಾಲದಿಂದಲೂ ನಡೆಯುತ್ತ ಬಂದಿದೆ. ಸಂಪ್ರದಾಯದಂತೆ ದೇವಿಗೆ ತಮ್ಮ ಹರಕೆ ತೀರಿಸಲು ಈ ಭಾಗದ ಜನರು ಅಗ್ನಿಕೊಂಡ ಹಾದು ಹೋಗುತ್ತಾರೆ. ರಾತ್ರಿ ಸುಮಾರು 56 ಮಂದಿ ಕೊಂಡದಲ್ಲಿ ಹಾದು ಹೋಗಿದ್ದಾರೆ.
ಇನ್ನೂ ಅಗ್ನಿಕೊಂಡ ಹಾದು ಹೋಗುವಾಗ ರಮೇಶ್ ಬಿದ್ದಿದ್ದರು. ಆದರೂ ಮತ್ತೆ ಎದ್ದು ರಮೇಶ್ ಓಡಿದ್ದಾರೆ. ಆದರೆ ಮತ್ತೆ ಕೊಂಡದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳು ರಮೇಶ್ ಅವರನ್ನು ರಕ್ಷಣೆ ಮಾಡುವಾಗ ಏಳು ಜನ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯವಾಗಿರುವ ರಮೇಶ್ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನ ನೀಡಲಾಗುತ್ತಿದೆ.
ಕಳೆದ ಎರಡು ವರ್ಷದ ಹಿಂದೆ ಈ ಕುದೂರಮ್ಮ ದೇವಿ ಜಾತ್ರೆಯಲ್ಲಿ ಭಕ್ತರೊಬ್ಬರು ಅಗ್ನಿ ಕೊಂಡಕ್ಕೆ ಬಿದ್ದಿದ್ದರು.