ನವದೆಹಲಿ: ಧಾರ್ಮಿಕ ನಾಯಕರ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾದ ಕರ್ನಾಟಕ ಮೂಲದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ಗೆ ಸುಪ್ರೀಂ ಕೋರ್ಟ್ ಐದು ದಿನಗಳ ಜಾಮೀನು ನೀಡಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಇಂದಿರಾ ಬ್ಯಾನರ್ಜಿ, ನ್ಯಾ.ಜೆ.ಕೆ ಮಹೇಶ್ವರಿ ಪೀಠ ಜಾಮೀನು ಮಂಜೂರು ಮಾಡಿದೆ.
ಜುಬೇರ್ ಪರ ವಾದ ಮಂಡಿಸಿದ, ಹಿರಿಯ ವಕೀಲ ಕಾಲಿನ್ ಗೊನ್ಸಾಲ, ಮೊಹಮ್ಮದ್ ಜುಬೇರ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಹೂಡಲು ಸಾಧ್ಯವಿಲ್ಲ. ಒಂದು ಟ್ವೀಟ್ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಮತ್ತು ನ್ಯಾಯಾಂಗ ಬಂಧನ ಪ್ರಶ್ನೆಗಳು ಅಪ್ರಸ್ತುತವಾಗಿದೆ. ನನ್ನ ಟ್ವೀಟ್ ಬಗ್ಗೆ ನಾನು ಒಪ್ಪಿಕೊಂಡಿದ್ದೇನೆ ಇದು ಅಪರಾಧವಾ? ಇದನ್ನು ತನಿಖೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಎಲ್ಲ ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಳಿಗೆ ಅವಮಾನ : ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಲುಕ್ ಔಟ್ ಸಂಕಟ
ಇದಕ್ಕೆ ಉತ್ತರ ಪ್ರದೇಶ ಪೊಲೀಸರ ಪರ ವಾದ ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆಳ ಹಂತದ ನ್ಯಾಯಾಲಯ ಜಾಮೀನು ರದ್ದು ಮಾಡಿದೆ. 14 ದಿನಗಳ ಕಸ್ಟಡಿ ನೀಡಿದೆ. ಆರೋಪಿ ಉದ್ದೇಶ ಪೂರ್ವಕವಾಗಿ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಟ್ವೀಟ್ಗಳನ್ನು ಕೋರ್ಟ್ ಪ್ರೋತ್ಸಾಹಿಸಬಾರದು.
ಆರೋಪಿ ವಿರುದ್ಧ 295A (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಮತ್ತು 153A (ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಾಥಮಿಕ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ವಜಾ
ವಾದ ಪ್ರತಿವಾದ ಆಲಿಸಿದ ಕೋರ್ಟ್, ಯಾವುದೇ ತಾಂತ್ರಿಕ ಸಾಕ್ಷ್ಯಗಳನ್ನು ನಾಶ ಮಾಡದಂತೆ ಷರತ್ತು ವಿಧಿಸಿ ಐದು ದಿನಗಳ ಜಾಮೀನು ನೀಡಿತು. ಮತ್ತು ಪ್ರಕರಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ರಜೆ ಕಾಲದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿತು.
ಮೊಹಮ್ಮದ್ ಜುಬೇರ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಹಿಂದೂ ಧಾರ್ಮಿಕ ಮುಖಂಡರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಹಿನ್ನೆಲೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಇದಕ್ಕೂ ಮುನ್ನ ದೆಹಲಿ ಪೊಲೀಸರು 2018 ರಲ್ಲಿ ಮಾಡಿದ ವಿವಾದಾತ್ಮಕ ಟ್ವೀಟ್ ಕಾರಣಕ್ಕೆ ಬಂಧಿಸಿದ್ದರು. ಸದ್ಯ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು, ದೆಹಲಿ ಪೊಲೀಸರ ಮುಂದೆ ಜುಬೇರ್ ಹಾಜರಾಗಬೇಕಿದೆ.