ಬೆಂಗಳೂರು: ಫೇಸ್ಬುಕ್ ಫೋಟೋ ಮೂಲಕ ವರನೊಬ್ಬನ ಅಸಲಿಯತ್ತು ಹೊರಬಿದ್ದಿದೆ. ಮೂರು ಮದುವೆಯ ಬಳಿಕ ಮತ್ತೊಂದು ಮದುವೆಯಾಗಿ ಇದೀಗ ಐದನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಮಾನುಲ್ಲಾ ಬಾಷಾ, ಆತನ ತಂದೆ ಬಾಷಾ ಹಾಗೂ ಝಾಕೀರ್ ಹುಸೇನ್ ಬಂಧಿತ ಆರೋಪಿಗಳು. ಆರೋಪಿ ಅಮಾನುಲ್ಲಾ ದುಬೈನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ವರದಕ್ಷಿಣೆ ಆಸೆಗೆ ಆಗಾಗ ದೇಶಕ್ಕೆ ಬಂದು ಮದುವೆಯಾಗಿ ವಂಚಿಸಿ ವಾಪಸ್ ಹೋಗುತ್ತಿದ್ದನು.
ಇತ್ತೀಚೆಗೆ ಅಮಾನುಲ್ಲಾ ಬೆಂಗಳೂರಿಗೆ ಬಂದಾಗ ಕೆ.ಜಿ ಹಳ್ಳಿ ನಿವಾಸಿಯೊಬ್ಬರ ಪುತ್ರಿಯನ್ನು ಮದುವೆ ಆಗಿದ್ದನು. ಪೋಷಕರು ಮೇ 23ರಂದು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಅಮಾನುಲ್ಲಾ ಜೊತೆ ಮಾಡಿಸಿದ್ದರು. ಅಲ್ಲದೆ ಮದುವೆ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.
ಫೋಟೋ ನೋಡಿ ಯುವತಿಯ ಪೋಷಕರಿಗೆ ಕರೆಗಳು ಬರಲಾರಂಭಿಸಿದವು. ಅಮಾನುಲ್ಲಾ ಈಗಾಗಲೇ ಮೂರು ಮದುವೆಯಾಗಿದ್ದ ಬಗ್ಗೆ ವಿಚಾರ ತಿಳಿಸಿದ್ದರು. ಈ ವಿಷಯ ತಿಳಿದು ಗಾಬರಿಗೊಂಡು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿಯ ಬಣ್ಣ ಬಯಲಾಗಿದೆ.
ಸದ್ಯ ಯುವತಿಯ ಪೋಷಕರು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು ತಮಿಳುನಾಡಿಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಗಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಐದನೇ ಮದುವೆಗೂ ಸಿದ್ಧತೆ ನೆಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.