– ಚಾಲಕನ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧದ ಶಂಕೆ
– ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ
ಭೋಪಾಲ್: ಲಾರಿ ಚಾಲಕನೋರ್ವನ ಕತ್ತು ಸೀಳಿ, ಕಣ್ಣುಗಳನ್ನು ಕಿತ್ತು ಕೊಲೆಗೈದು, ಆತ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಆತನನ್ನು ಫ್ಯಾನಿಗೆ ನೇತಾಕಿದ ಕೊಲೆಗಾರ ಪರಾರಿಯಾದ ಘಟನೆ ಮಧ್ಯಪ್ರದೇಶದ ಮನಪುರ ಪಟ್ಟಣದಲ್ಲಿ ನಡೆದಿದೆ.
ಮನಪುರದ ಸೊಂದಿಯಾ ಮೊಹಲ್ಲಾದ ನಿವಾಸಿ ಲಾರಿ ಚಾಲಕ ರವಿ(27) ಮೃತ ದುರ್ದೈವಿ. ಆರೋಪಿ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಸೊಂದಿಯಾ ಮೊಹಲ್ಲಾದ ಅಪಾರ್ಟ್ಮೆಂಟ್ ಒಂದರಲ್ಲಿ ರವಿ ತನ್ನ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಶುಕ್ರವಾರ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮನೆಗೆ ತೆರೆಳಿದ್ದ ವೇಳೆ ದುಷ್ಕರ್ಮಿ ಮನೆಗೆ ನುಗ್ಗಿ ರವಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.
ಮೊದಲು ರವಿಯ ಕತ್ತು ಸೀಳಿ ಕೊಲೆಗೈದು, ಬಳಿಕ ಆತನ ಎರಡು ಕಣ್ಣುಗಳನ್ನೂ ಕಿತ್ತು ಆರೋಪಿ ಕ್ರೂರತೆ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಬಿಂಬಿಸಲು ರವಿಯ ಮೃತದೇಹವನ್ನು ಫ್ಯಾನಿಗೆ ನೇತಾಕಿ, ನೇಣಿಗೆ ಶರಣಾಗಿರುವ ರೀತಿ ಕಾಣುವಂತೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇತ್ತ ಅಕ್ಕಪಕ್ಕದ ಮನೆಯವರು ರವಿ ಕುಟುಂಬವೆಲ್ಲ ಸಂಬಂಧಿಕರ ಮನೆಗೆ ತೆರಳಿದ್ದಾರೆ, ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿದ್ದರು. ಆದರೆ ಘಟನೆ ನಡೆದ ಮರುದಿನ ರವಿ ಮನೆ ಬಳಿ ಹೋಗುತ್ತಿದ್ದ ನೆರೆ ಮನೆಯವರು ಅನುಮಾನ ಬಂದು ಕಿಟಕಿಯಲ್ಲಿ ನೋಡಿದಾಗ ರವಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಲ್ಲದೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ರವಿ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿದ್ದಾರೆ. ಜೊತೆಗೆ ಹಣ ಅಥವಾ ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.