ಮಂಡ್ಯ: ಜಿಲ್ಲೆಯಲ್ಲಿ ಮತಗಳಿಸಲು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ನಟ ಯಶ್, ಭ್ರಷ್ಟಾಚಾರ ಮಾಡಿ ಯಾವತ್ತು ಗೆಲ್ಲೋಕೆ ಸಾಧ್ಯವಿಲ್ಲ ಎಂದಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶ್ ಅವರು, ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಜನರೆ ನಮಗೆ ಮಾಹಿತಿ ನೀಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬಂದು ಮನೆ ಕದ ತಟ್ಟುವ ಕೆಲಸ ನಡೆಯುತ್ತಿದೆ. ಮತ ಪಡೆಯಲು ಹಣ ಹಂಚಿಕೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನಟ ಯಶ್ ಕರೆ ನೀಡಿದರು.
ಇಂದು ಅಂಬೇಡ್ಕರ್ ಅವರ ಜಯಂತಿ ಆಗಿದ್ದು, ಪ್ರಜಾಪ್ರಭುತ್ವವನ್ನು ಉಳಿಸಲು ಅವರು ಒಳ್ಳೆಯ ಸಂವಿಧಾನವನ್ನು ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳುವ ಹೋಗುವ ಕರ್ತವ್ಯ ನಮ್ಮದಾಗಿದೆ. ಸಾಮಾನ್ಯ ವ್ಯಕ್ತಿಯೂ ಸಿಎಂ ಆಗುವಂತಹ ಅವಕಾಶ ಸಂವಿಧಾನದಲ್ಲಿ ಇದೆ. ಆದರೆ ಇಲ್ಲಿ ದುಡ್ಡು ಎಂದಿಗೂ ಡಾಮಿನೇಟ್ ಮಾಡಬಾರದು. ಅದ್ದರಿಂದ ಈ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.
ಕೆಲವೇ ದಿನಗಳು ಬಾಕಿ ಇದೆ. ಈ ವೇಳೆ ಹಣದ ಮೂಲಕ ಎಲ್ಲರನ್ನು ತಿರುಗಿಸುತ್ತೇವೆ ಎನ್ನುವ ಮಾತು ಕೇಳಿ ಬಂದಿದೆ. ಅಲ್ಲದೇ ಹಣ ನೀಡಿ ಪ್ರಮಾಣ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಮಾಹಿತಿ ಇದೆ. ಆದರೆ ನಮ್ಮ ಪರ ಜನರಿದ್ದಾರೆ, ದೇವರನ್ನು ನಂಬಿದ್ದೇವೆ. ಆದರೆ ಹಣ ನೀಡಿ ಅಣೆ ಪ್ರಮಾಣ ಮಾಡಿಸಿಕೊಳ್ಳುವಂತಹ ತಪ್ಪುಗಳಿಗೆ ಎಂದಿಗೂ ದೇವರ ಬೆಂಬಲ ಇರುವುದಿಲ್ಲ ಎಂದರು.
ಇದೇ ವೇಳೆ ಏ.16 ರಂದು ನಟ ದರ್ಶನ್, ಸುಮಲತಾ, ಅಭಿಷೇಕ್ ಅವರು ಒಟ್ಟಿಗೆ ಸೇರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದರು. ಜನರು ಈಗಾಗಲೇ ಎಲ್ಲರೂ ಒಟ್ಟಿಗೆ ಎಂದು ಕಾಣಿಸಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಮಂಡ್ಯ ಜನ ಸ್ವಾಭಿಮಾನಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.