ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್ ಮೇಲಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಘಟನೆ ವೇಳೆ ಸ್ಥಳದಲ್ಲಿದ್ದ ಖಾಸಗಿ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಬಳಿಕ ಅವರನ್ನು ಬಚ್ಚಿಡಲಾಗಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಕಂಪ್ಲಿ ಶಾಸಕ ಗಣೇಶ್ ಹಾಗು ಆನಂದ್ ಸಿಂಗ್ ನಡುವಿನ ಬಡಿದಾಟದ ವೇಳೆ ಗಣೇಶ್ ನಿಯೋಜಿಸಿದ್ದ ಖಾಸಗಿ ಗನ್ಮ್ಯಾನ್ ಶರಣಪ್ಪ ಕೂಡ ಇದ್ದರು. ಈ ನಡುವೆ ಗಣೇಶ್ ಕೋಪದಲ್ಲಿ ಗನ್ಮ್ಯಾನ್ ಬಳಿ ಇದ್ದ ಗನ್ ಕೇಳಿದ್ದಾರೆ. ಗನ್ ನೀಡಿದ್ರೆ ಅನಾಹುತ ಸಂಭವಿಸಬಹುದು ಎಂದು ತಿಳಿದು ಸಮಾಧಾನ ಮಾಡಲು ಶರಣಪ್ಪ ಯತ್ನಿಸಿದ್ದಾರೆ. ಗನ್ ನೀಡದ್ದಕ್ಕೆ ಮತ್ತಷ್ಟು ಕೋಪಗೊಂಡಿದ್ದ ಗಣೇಶ್, ಶರಣಪ್ಪ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಗಣೇಶ್ ರೌದ್ರಾವತಾರವನ್ನು ಕಂಡ ಕಾಂಗ್ರೆಸ್ ಶಾಸಕರು ಕ್ಷಣ ಕಾಲ ಶಾಕ್ಗೆ ಒಳಗಾಗಿದ್ದು, ಆ ಬಳಿಕ ಗಲಾಟೆಯನ್ನು ಬಿಡಿಸಿ ಗಣೇಶ್ ಅವರನ್ನು ರೂಮಿಗೆ ಕಳುಹಿಸಿದ್ದಾರೆ. ಆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಕೊಂಡ್ಯೊಯಲು ಹೋಟೆಲ್ ಸಿಬ್ಬಂದಿ ಕಾರ್ಯ ಪ್ರವೃತ್ತರಾದರೆ, ಇತ್ತ ಘಟನೆಯಲ್ಲಿ ಗಾಯಗೊಂಡಿದ್ದ ಗನ್ ಮ್ಯಾನ್ರನ್ನು ಕೂಡ ಹೋಟೆಲ್ ನಿಂದ ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಶಾಸಕ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಶರಣಪ್ಪ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಆಗಿರುವ ಹಾಗೂ ಶರಣಪ್ಪ ಮೇಲೆ ಹಲ್ಲೆ ಮಾಡಿದ್ದಕ್ಕೆ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗುತ್ತದೆ ಎನ್ನುವ ಭಯದಿಂದ ಗಣೇಶ್ ಅವರನ್ನು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಬಳಿಕ ರೆಸಾರ್ಟ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಗಣೇಶ್, ಸರ್ಕಾರಿ ಗನ್ಮ್ಯಾನ್ನನ್ನು ತೋರಿಸಿ, ಹಲ್ಲೆ ಮಾಡಿರುವ ಘಟನೆ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿರುವ ವರದಿ ಸುಳ್ಳು. ಯಾವುದೇ ಗನ್ಮ್ಯಾನ್ ಮೇಲೆ ಹಲ್ಲೆ ನಡೆದಿಲ್ಲ. ಸಣ್ಣ ವೈಯಕ್ತಿಕ ವಿಚಾರಕ್ಕೆ ಚರ್ಚೆ ನಡೆದಿದ್ದು, ಯಾವುದೇ ಕಾರಣಕ್ಕೂ ಹಲ್ಲೆ ನಡೆದಿಲ್ಲ ಎಂದು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.
https://www.youtube.com/watch?v=pgwGXV3NmMA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv