ರಾಮನಗರ: ಗಂಡ-ಹೆಂಡತಿ ಜಗಳದಲ್ಲಿ ಪದೇ ಪದೇ ಮೂಗು ತೂರಿಸಿ ಮಗಳ ಪರ ನಿಂತು ತನ್ನನ್ನು ನಿಂದಿಸ್ತಾ ಇದ್ದ ಅತ್ತೆಯನ್ನ ಮಾಜಿ ಸೈನಿಕನೊಬ್ಬ ಹತ್ಯೆ ಮಾಡಿದ್ದಾನೆ.
ರಾಮನಗರ ತಾಲೂಕಿನ ಕೆಂಚನಕುಪ್ಪೆ ಗ್ರಾಮದಲ್ಲಿ ಬಿಎಸ್ಎಫ್ ಮಾಜಿ ಸೈನಿಕ ನಾಗರಾಜ್ ಅತ್ತೆ ಚಿಕ್ಕತಿಮ್ಮಮ್ಮ (65) ಅವರನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿ ಗ್ರಾಮದವನಾದ ನಾಗರಾಜ್, ಬಿಎಸ್ಎಫ್ ನಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿಯಲ್ಲಿ ದೇಶ ಸೇವೆ ಮಾಡಿದ್ದ. ಮೂವತ್ತು ವರ್ಷಗಳ ಹಿಂದೆ ಮೃತಳ ಪುತ್ರಿ ಮಂಗಳಾ ಎಂಬುವವರನ್ನ ಮದುವೆಯಾಗಿದ್ದ. ದಂಪತಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ. ನಾಗರಾಜ್ ಕಳೆದ ಆರು ವರ್ಷಗಳಿಂದ ಕೆಂಚನಕುಪ್ಪೆ ಗ್ರಾಮದಲ್ಲಿಯೇ ನೆಲೆಸಿದ್ದನು.
ಇತ್ತೀಚಿಗೆ ನಾಗರಾಜ್ ಸಂಸಾರದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಹೀಗೆ ವಾರದ ಹಿಂದೆ ಕೂಡ ಜಗಳ ನಡೆದಿತ್ತು. ಈ ಸಂಬಂಧ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಅಲ್ಲದೆ ನಿನ್ನೆ ರಾತ್ರಿ ಕೂಡ ಗಲಾಟೆ ನಡೆದು ಮಂಗಲಾ ತನ್ನ ತಾಯಿ ಮನೆ ಸೇರಿದ್ದರು. ಇದೇ ವಿಚಾರವಾಗಿ ಮಚ್ಚು ಹಿಡಿದು ಅತ್ತೆ ಮನೆ ಬಳಿ ಬಂದ ನಾಗರಾಜ್, ಪತ್ನಿ ಮಂಗಳರನ್ನ ಹುಡುಕಿದ್ದಾನೆ. ಈ ವೇಳೆ ನಾಗರಾಜ್ ಕೈಯಲ್ಲಿ ಮಚ್ಚು ಕಂಡ, ಅತ್ತೆ ಚಿಕ್ಕತಿಮ್ಮಮ್ಮ ನಾಗರಾಜ್ ನನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ನಾಗರಾಜ್ ಮಚ್ಚಿನಿಂದ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಬಿಡದಿ ಠಾಣಾ ಪೊಲೀಸರು ಆಗಮಿಸಿಸದ್ದು, ನಾಗರಾಜ್ ನನ್ನು ಬಂಧಿಸಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.