ಬೆಂಗಳೂರು: ಮಾಜಿ ಶಾಸಕರಾದ ಸುರೇಶ್ ಗೌಡ ಹಾಗೂ ಶಿವರಾಮೇಗೌಡ ಜೆಡಿಎಸ್ ಸೇರ್ಪಡೆ ನಿಶ್ಚಿತವಾಗಿದೆ.
ಇಂದು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್ಡಿ ದೇವೇಗೌಡ ನಿವಾಸದಲ್ಲಿ ಸುರೇಶ್ಗೌಡ ಹಾಗೂ ಶಿವರಾಮೇಗೌಡ ಅವರು ಹೆಚ್ಡಿಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ದೇವೇಗೌಡರೊಂದಿಗಿನ ಮಾತುಕತೆ ಯಶಸ್ವಿಯಾಗಿದ್ದು, ಏಪ್ರಿಲ್ 10ರಂದು ಇಬ್ಬರು ನಾಯಕರು ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಸುರೇಶ್ಗೌಡರಿಗೆ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಲಾಗುತ್ತಿದ್ದು, ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಹಾಗೆ ವಿಧಾನಪರಿಷತ್ ಪದವೀಧರ ಕ್ಷೇತ್ರದಿಂದ ಶಿವರಾಮೇಗೌಡರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿದೆ.
ಇದೇ ವೇಳೆ ಮಾತನಾಡಿದ ಶಿವರಾಮೇಗೌಡ, ಸಿದ್ದರಾಮಯ್ಯ ಅವರು ಯಾರಿಗಾದ್ರು ಟಿಕೆಟ್ ಕೊಡಲಿ. ನಾನು 10ರಂದು ಜೆಡಿಎಸ್ ಸೇರುತ್ತಿದ್ದೇನೆ. ಜೆಡಿಎಸ್ ಪಕ್ಷವನ್ನ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೇನೆ. ನಾಗಮಂಗಲ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಮಾಡ್ತೇವೆ. ಅಲ್ಲಿ ಯಾರಿಗೆ ಟಿಕೆಟ್ ಅಂತಾ ಘೋಷಣೆ ಮಾಡಲಾಗುತ್ತೆ. ಆ ನಿರ್ಧಾರಕ್ಕೆ ನಾನು ಮತ್ತು ಸುರೇಶ್ ಗೌಡ ಅವರು ಬದ್ಧರಾಗಿರುತ್ತೇವೆ. ನಮ್ಮಿಬ್ಬರಲ್ಲಿ ಒಬ್ಬರು ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡ್ತಾರೆ. ಇನ್ನೊಬ್ಬರಿಗೆ ಎಂಎಲ್ಸಿ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲಾಗಿದೆ ಅಂತ ಹೇಳಿದ್ರು.