ರಾಯಚೂರು: ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರು ಮಾಜಿ ಸೈನಿಕರಿಗೆ ಪಾದ ಪೂಜೆ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ನಗರದ ಐಡಿಎಸ್ ಎಂಟಿ ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ತಿಪ್ಪರಾಜು 15 ಮಂದಿ ಮಾಜಿ ಸೈನಿಕರಿಗೆ ಪಾದ ಪೂಜೆ ಮಾಡಿದ್ದಾರೆ. 42ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಿಪ್ಪರಾಜು ಯಾವುದೇ ಸಡಗರ ಸಂಭ್ರಮವಿಲ್ಲದೆ ತಮ್ಮ ಹುಟ್ಟುಹಬ್ಬವನ್ನ ಸರಳವಾಗಿ ಆರಿಸಿಕೊಂಡರು. ಪುಲ್ವಾಮ ಘಟನೆ ಹಾಗೂ ದೇಶದ ವೀರಯೋಧ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ವಶದಲ್ಲಿದ್ದರಿಂದ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಅಂತ ಆಚರಣೆಯನ್ನ ಕೈಬಿಟ್ಟಿದ್ದರು.
ತಮ್ಮ ಅಭಿಮಾನಿಗಳು ಕಾರ್ಯಕರ್ತರಿಗೆ ಹಾರ ತುರಾಯಿಗಳನ್ನ ತರಬಾರದು ಎಂದು ಮೊದಲೆ ಸೂಚಿಸಿದ್ದರು. ಹೀಗಾಗಿ ಮಾಜಿ ಸೈನಿಕರಿಗೆ ಪಾದ ಪೂಜೆ ಮಾಡಿ ಆರತಿ ಬೆಳಗಿ, ಶಾಲು ಹೊದಿಸಿ ಸನ್ಮಾನ ಮಾಡಿ ಫಲಪುಷ್ಪ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ರಾಯಚೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ತಿಪ್ಪರಾಜು ಪ್ರಧಾನಿ ನರೇಂದ್ರ ಮೋದಿ ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿದ್ದರ ಪ್ರೇರಣೆಯಿಂದ ಮಾಜಿ ಸೈನಿಕರ ಪಾದಪೂಜೆ ಮಾಡಿದ್ದಾರೆ.
ಪುಲ್ವಾಮಾದಲ್ಲಿ ನಮ್ಮ ವೀರಯೋಧ ಗುರು ಸೇರಿದಂತೆ ಇಡೀ ದೇಶದ ಯೋಧರು ಹುತಾತ್ಮರಾದರು. ಇದರಿಂದ ಜನರು ದುಃಖದಲ್ಲಿದ್ದಾರೆ. ಹೀಗಾಗಿ ನನ್ನ ಬರ್ತ್ ಡೇಯನ್ನು ಆಚರಿಸಿಕೊಳ್ಳಬಾರದು ಎಂದು ನನ್ನ ಬೆಂಬಲಿಗರಿಗೆ, ಅಭಿಮಾನಿಗಳಿಗೆ ತಿಳಿಸಿದ್ದೆ. ಇಂದು ರಾಯಚೂರಿನಲ್ಲಿರುವ ಮಾಜಿ ಸೈನಿಕರನ್ನು ಕರೆದು ಅವರಿಗೆ ಗೌರವ ಸಪರ್ಮಣೆ ಮಾಡಿದ್ದೇನೆ. ಈ ಮೂಲಕ ದೇಶದ ಎಲ್ಲ ಸೈನಿಕರಿಗೆ ಗೌರವ ಸಲ್ಲಿಸುತ್ತೇನೆ ಎಂದು ತಿಪ್ಪರಾಜು ಹವಾಲ್ದಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv