ಬೆಂಗಳೂರು: ಸರ್ಕಾರ ಕನ್ನಡಿಗರನ್ನು ವೈರಿಗಳನ್ನಾಗಿ ಕಾಣುತ್ತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ವಿಚಾರದಲ್ಲಿ ರಾಜ್ಯದ ಜನತೆ 45 ದಿನಗಳಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ಆದರೆ 45 ದಿನಗಳಲ್ಲಿ ಸರ್ಕಾರದ ಸಾಧನೆ ಮಾತ್ರ ಶೂನ್ಯ ಎಂದರು.
ಐಸಿಎಂಆರ್ ಈವರೆಗೂ ರಾಜ್ಯ ಸರ್ಕಾರಕ್ಕೆ ವರದಿ ಕೊಟ್ಟಿಲ್ಲ. ಈ ವಿಚಾರವಾಗಿ ರಾಜ್ಯದ ಅಧಿಕಾರಿಗಳು ಐಸಿಎಂಆರ್ ಗೆ ಪತ್ರ ಕೂಡ ಬರೆದಿದ್ದಾರೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ವರದಿ ಬಹಿರಂಗ ಪಡಿಸದಿದ್ದಲ್ಲಿ, ಕೋರ್ಟ್ ಮೂಲಕ ನಾವು ಮಾಹಿತಿ ಪಡೆಯಲು ಕೋರ್ಟ್ ಮೆಟ್ಟಿಲೇರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಐಸಿಎಂಆರ್ ವರದಿ ಕೊಟ್ಟರಷ್ಟೆ ರಾಜ್ಯದಲ್ಲಿ ಕೊರೊನಾ ಯಾವ ಸ್ಟೇಜ್ ನಲ್ಲಿದೆ, ಕಮ್ಯುನಿಟಿ ಸ್ಪ್ರೆಡ್ ಆಗಿದೆಯಾ..?, ಯಾವ ವಯಸ್ಸಿನವರು ಹೆಚ್ಚು ಸೋಂಕಿತರಾಗುವ ಆಪಾಯವಿದೆ? ಮುಂದಿನ 3 ತಿಂಗಳಲ್ಲಿ ಏನಾಗಬಹುದು? ಹೀಗೆ ಎಲ್ಲವು ನಮಗೆ ಮಾಹಿತಿ ಸಿಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಐಸಿಎಂ ಆರ್ ರಿಪೋರ್ಟ್ ತರಿಸಿಕೊಳ್ಳಬೇಕು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಸಿಎಂಆರ್ಗೆ ಪತ್ರ ಬರೆದರೆ ಇನ್ನೂ ವರದಿ ಬಂದಿಲ್ಲ ಎಂದು ತಿಳಿಸಿದರು.
ಲಾಗ್ ಡೌನ್ ಓಪನ್ ವಿಚಾರ ಸೇರಿದಂತೆ ಎಲ್ಲಾ ವಿಚಾರದಲ್ಲಿ ಸರ್ಕಾರದ ಗೊಂದಲ ಮುಂದುವರಿದಿದೆ. ಕಾರ್ಮಿಕರ ಸಮಸ್ಯೆ ಮುಂದುವರಿದಿದೆ. ಪಾಸ್ ಪಡೆಯುವುದೇ ಹರ ಸಾಹಸ ಆಗಿದೆ. ಕ್ವಾರೈಂಟೈನ್ ಮಾಡುವ ವಿಚಾರ ಮುಂದುವರಿದಿದೆ. ಕನ್ನಡಿಗರನ್ನು ವೈರಿಗಳ ರೀತಿಯಲ್ಲಿ ನೋಡಲಾಗ್ತಿದೆ. ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಬಸ್ಸಿನಲ್ಲಿ ಕರೆತರುವ ಕೆಲಸ ಆಗಬೇಕು ಎಂದರು.
ವಿದೇಶದಿಂದ ಕರೆತರುವ ಕೆಲಸ ಆಗ್ತಿದೆ. ಕರಾವಳಿ ಭಾಗದ ಜನರೂ ವಿದೇಶದಲ್ಲಿ ಇದ್ದಾರೆ. ಬೆಂಗಳೂರು ಹಾಗೂ ಮಂಗಳೂರಿಗೆ ವಿಮಾನದ ಮೂಲಕ ಕರೆತರುವ ವ್ಯವಸ್ಥೆ ಮಾಡಬೇಕು. ಈವರೆಗೆ ಎಷ್ಟು ಜನರನ್ನು ಕ್ವಾರೈಂಟೈನ್ ಮಾಡಿರುವುದಾಗಿ ಪಟ್ಟಿ ಕೊಟ್ಟಿಲ್ಲ. ಲಾಗ್ ಡೌನ್ ವಿಚಾರದಲ್ಲಿ ಸರ್ಕಾರ ಸೂಕ್ತ ಪ್ಲಾನ್ ಮಾಡಿಲ್ಲ. ಆ್ಯಕ್ಷನ್ ಪ್ಲಾನ್ ಮಾಡುವಲ್ಲಿ ಸರ್ಕಾರ ಎಡವಿದೆ ಎಂದು ಗಂಭೀರ ಆರೋಪ ಮಾಡಿದ ಖಾದರ್, ಈ ಕೂಡಲೇ ಐಸಿಎಂಆರ್ ವರದಿ ತರಿಸಿ, ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.