ದಾವಣಗೆರೆ: ನನ್ನ ಮಗನದ್ದು ವ್ಯವಸ್ಥಿತ ಸಂಚು. ಹೇಡಿಗಳು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಶಿಖಂಡಿಗಳು ಇಂತಹ ಕೆಲಸ ಮಾಡಿದ್ದಾರೆ. ಮಚ್ಚಿನಿಂದ ತಲೆ ಹಾಗೂ ಬೆನ್ನಿಗೆ ಹೊಡೆದಿದ್ದಾರೆ. ಬಿಳಿ ಬಟ್ಟೆಯಿಂದ ಆತನ ಕಾಲು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ (Renukacharya) ಆರೋಪಿಸಿದ್ದಾರೆ.
ಘಟನೆ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವು ಸಹಜ ಸಾವು ಅಲ್ಲ. ಪೊಲೀಸರಿಗೆ ಮೊದಲೇ ಹೇಳಿದ್ದೆ ನನ್ನಮಗ ಕಿಡ್ನಾಪ್ ಆಗಿದ್ದಾನೆ ಎಂದು. ಆದರೆ ಹುಡುಕಾಟ ನಡೆಸಿದ್ರು ಈಗ ಅವನ ಮೃತದೇಹ ಸಿಕ್ಕಿದೆ. ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಲಿ. ನಮಗೆ ದೇವರೇ ನ್ಯಾಯ ಕೊಡಿಸಬೇಕು. ನನ್ನ ಮಗ ಬೆಂಗಳೂರಿಗೆ (Bengaluru) ಹೋಗುತ್ತೇನೆ ಎಂದು ಹೇಳಿದ್ದ. ನಮ್ಮ ಮನೆಯ ನಂದಾದೀಪ ಹಾರಿ ಹೋಗಿದೆ. ಅವನು ನನ್ನ ಜೊತೆ ಕ್ಷೇತ್ರದಲ್ಲಿ ಬೆಂಬಲವಾಗಿದ್ದ. ಜನರ ಪ್ರೀತಿ ಗಳಿಸಿದ್ದ ಈಗ ಅವನನ್ನು ಕಳೆದುಕೊಂಡಿದ್ದೇನೆ ಎಂದು ದುಃಖಿತರಾದರು. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ
ನನ್ನ ಮಗ ಬಹಳ ಬೇಗ ಬೆಳೆಯುತ್ತಿದ್ದ. ಸದಾ ಕೇಸರಿ ಶಾಲು, ಪಿಂಕ್ ಶರ್ಟ್ ಧರಿಸುತ್ತಿದ್ದ. ಇದನ್ನು ನೋಡಿ ಕೆಲವರು ಸಹಿಸುತ್ತಿರಲಿಲ್ಲ. ನನ್ನ ರಾಜಕಾರಣಕ್ಕೆ ಬೆನ್ನೆಲುಬಾಗಿ ನಿಂತಿದ್ದ. ನನ್ನ ಮಗನ ಸಾವಿಗೆ ನಾನೇ ಕಾರಣನಾಗಿಬಿಟ್ಟೆ. ಹೇಡಿಗಳು ನನ್ನನ್ನು ಬಲಿ ತೆಗೆದುಕೊಳ್ಳಬೇಕಿತ್ತು, ಆದರೆ ನನ್ನ ಮಗನನ್ನು ಬಲಿ ತೆಗೆದುಕೊಂಡರು ಎಂದು ಮರುಗಿದರು. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
ಕಳೆದೊಂದು ವಾರದಿಂದ ಹೊನ್ನಾಳಿಯಲ್ಲಿ ಅನುಮಾನಾಸ್ಪದವಾಗಿ ವಾಹನವೊಂದು ಓಡಾಡುತ್ತಿದೆ ಹುಷಾರಾಗಿರಿ ಅಂದಿದ್ದರು. ನಾನು ನಮ್ಮ ಹುಡುಗನಿಗೆ ಹುಷಾರಾಗಿರು ಅಂದಿದ್ದೆ. ಅಷ್ಟರಲ್ಲಿಯೇ ಹೇಡಿಗಳು ಇಂತಹ ಕೆಲಸ ಮಾಡಿದ್ದಾರೆ. ನಮ್ಮ ಹುಡುಗನ ಅಂತ್ಯ ಸಂಸ್ಕಾರವನ್ನು ನಮ್ಮ ಹೊಸ ಮನೆ ಬಳಿ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನಮ್ಮ ಮನೆಯವರು ಒಪ್ಪುತ್ತಿಲ್ಲ. ತೋಟದಲ್ಲಿ ನಮ್ಮ ಹಿರಿಯರನ್ನೆಲ್ಲಾ ಮಾಡಿದ್ದೇವೆ ಅಲ್ಲೇ ಮಾಡಬೇಕು ಎನ್ನುತ್ತಿದ್ದಾರೆ ನೋಡೋಣ. ಮುಖ್ಯಮಂತ್ರಿಗಳು (CM) ಫೋನ್ ಮಾಡಿದ್ದರು ಮಾತನಾಡಲು ಆಗಲಿಲ್ಲ. ಯಡಿಯೂರಪ್ಪ, ಶೆಟ್ಟರ್, ಸಿ.ಟಿ.ರವಿ ಎಲ್ಲರೂ ಪೋನ್ ಮಾಡಿದ್ದರು ಎಂದರು.