– ನನ್ನ ವಿರುದ್ಧ 100 ಎಫ್ಐಆರ್ ಹಾಕಿದ್ರೂ ಹೆದರಲ್ಲ
ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆಯಂತವರ (Mallikarjun Kharge) ಹೊಟ್ಟೆಯಲ್ಲಿ ಪ್ರಿಯಾಂಕ್ ಖರ್ಗೆ ಅಂತಹ ಕೆಟ್ಟ ಹುಳ ಹುಟ್ಟಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯನ್ನು (Priyank Kharge) ಕಾಂಗ್ರೆಸ್ ನವರು ಅಂತಾ ಕರೆಯಲು ಇಷ್ಟಪಡಲ್ಲ. ಇವರು ಯಾರೂ ಕಾಂಗ್ರೆಸ್ ನವರಲ್ಲ. ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ಹಂಚಿಕೊಂಡಿರುವವರು ಎಂದರು.
ಜೈಲಿಗೆ ಹೋಗಲ್ಲ: ಮುಖ್ಯಮಂತ್ರಿ, ಸುರ್ಜೇವಾಲಾ ಅವರಿಗೆ 10 ಸಾವಿರ ದಂಡ ಕಟ್ಟಿ ಅಂತಾ ಕೋರ್ಟ್ ಹೇಳಿದೆ. ನಾನು ದಂಡ ಕಟ್ಟುವ ಪ್ರಸಂಗ ಬಂದಿಲ್ಲ. ಡಿಸಿಎಂ ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಸುರೇಶ್ ಕೊಟ್ಟಿರುವ ಹೇಳಿಕೆ ಸರಿ ಇದೆಯಾ ಅಂತಾ ಸ್ಪಷ್ಟಪಡಿಸಲಿ. ನಾನು ಬೇಕಾದಷ್ಟು ಹೇಳಿಕೆ ಕೊಟ್ಟಿದ್ದೇನೆ. ಒಂದೇ ಒಂದು ರೂಪಾಯಿ ಪೆನಾಲ್ಟಿ ಕಟ್ಟಿಲ್ಲ. ಒಂದೇ ಒಂದು ದಿನ ಜೈಲಿಗೆ ಹೋಗಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿ: ತೆರಿಗೆ ಹಂಚಿಕೆ ಬಗ್ಗೆ ಸುಳ್ಳು ಹೇಳಿಕೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆ ಅಂತಾ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಸುಮ್ಮನೆ ಏಕೆ ಸುಳ್ಳು ಹೇಳಿಕೆ ಕೊಡ್ತೀರಾ?, ಶ್ವೇತಪತ್ರ ಹೊರಡಿಸಿ, ಶ್ವೇತಪತ್ರ ಹೊರಡಿಸಲು ಏಕೆ ಭಯ?, ಶ್ವೇತಪತ್ರ ಹೊರಡಿಸಿದರೆ ನಿಮ್ಮ ಬಂಡವಾಳ ಬಹಿರಂಗವಾಗುತ್ತದೆ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್ ಎಸ್ಎಸ್ (RSS) ಬಗ್ಗೆ ಮಾತನಾಡಿರೋದು ವಾಪಸ್ ಪಡೆಯರಿ. ಆರ್ ಎಸ್ ಎಸ್ ಒಳ್ಳೆಯ ಸಂಸ್ಕಾರ ಕಲಿಸುತ್ತಿದೆ. ನನ್ನ ವಿರುದ್ಧ ಇನ್ನೂ 100 ಎಫ್ ಐಆರ್ ಹಾಕಿ ನಾನು ಹೆದರುವುದಿಲ್ಲ. ನನ್ನ ಹೇಳಿಕೆ ವಿರುದ್ದ ಎಫ್ ಐಆರ್ ಹಾಕಿಸಿದ್ದೀರಾ. ಡಿ.ಕೆಸುರೇಶ್ (SK Suresh) ಹೇಳಿಕೆ ವಿರುದ್ದ ಏಕೆ ಎಫ್ಐಆರ್ ಹಾಕಿಲ್ಲ. ರಾಷ್ಟ್ರಭಕ್ತರ ಕಂಡರೆ ಸಿದ್ದರಾಮಯ್ಯ ಅವರಿಗೆ ಅಲರ್ಜಿ. ನಾನು ಡಿ.ಕೆ.ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿಲ್ಲ. ದೇಶ ವಿಭಜನೆ ಮಾಡುವ ಹೇಳಿಕೆ, ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.
ಕ್ಲೀನ್ ಚಿಟ್ ಸಿಗೋ ವಿಶ್ವಾಸ: ನನ್ನ ವಿರುದ್ದ ದಾಖಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಈಗ ದಾಖಲಾಗಿರುವ ಎಫ್ ಐಆರ್ ನಲ್ಲು ಕ್ಲೀನ್ ಚಿಟ್ ಸಿಗುವ ವಿಶ್ವಾಸ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷೆಯನ್ನು ಸುಧಾರಿಸಿಕೊಳ್ಳಬೇಕು. ಎಲ್ಲರ ಬಗ್ಗಯೂ ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧವೂ ಏಕ ವಚನದಲ್ಲಿ ಮಾತನಾಡ್ತಾರೆ. ಅವರ ಭಾಷೆ ಬಳಕೆ ಸರಿಪಡಿಸಿಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಅವರಂತಹ ಚಿಲ್ಲರೆ ಮಾತಿಗೆ ಉತ್ತರ ಕೊಡಲ್ಲ ಎಂದು ಈಶ್ವರಪ್ಪ ಸಿಡಿಮಿಡಿಗೊಂಡರು.