– ದೊರೆಸ್ವಾಮಿಯವರಲ್ಲಿ ಯತ್ನಾಳ್ ಕ್ಷಮೆ ಕೇಳಬೇಕು
ಹಾಸನ: ರಾಜ್ಯದ ಗೃಹ ಮಂತ್ರಿಗಳೇ ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರೈತರು 700 ಎಕರೆ ಜಮೀನು ಕೊಟ್ಟಿದ್ದಾರೆ. ಇದರಿಂದ ಸುಮಾರು 12 ಸಾವಿರ ನಿವೇಶನ ಆಗಲಿದೆ. ಜನರಿಗೂ ಕೂಡ ಕಡಿಮೆ ದರಕ್ಕೆ ಸೈಟ್ ಸಿಗುತ್ತೆ. ಜಮೀನು ಕೊಟ್ಟ ರೈತರಿಗೂ ಶೇ.50ರಷ್ಟು ಹಣ ದೊರೆಯಲಿದೆ. ಆದರೆ ಹಾಸನದಲ್ಲಿ ಹೌಸಿಂಗ್ ಬೋರ್ಡ್, ಪ್ರಾಧಿಕಾರಗಳಿಂದ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಖಾಸಗಿಯವರ ಸೈಟ್ ದಂಧೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಈಗ ಪೊಲೀಸರು ಕೂಡ ಸೈಟ್ ಮಾಡಲು ಹೊರಟಿದ್ದಾರೆ. ರಾಜ್ಯದ ಗೃಹ ಮಂತ್ರಿಗಳೇ ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ರೇವಣ್ಣ ಗರಂ ಆಗಿದ್ದಾರೆ.
ಈ ಬಗ್ಗೆ ಡಿಸಿಯವರ ಗಮನಕ್ಕೆ ತಂದಿದ್ದೇನೆ. ನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನೇನಾದರೂ ಸಚಿವನಾಗಿದ್ರೆ ಅವನನ್ನು ಒದ್ದು ಒಳಗೆ ಹಾಕಿಸುತ್ತಿದ್ದೆ. ಪಿಡಿಓಗಳು ಕೂಡ ದುಡ್ಡು ಕೊಟ್ಟರೆ ಯಾವುದಕ್ಕೆ ಬೇಕಾದ್ರು ನಿರಾಪೇಕ್ಷಣಾ ಪತ್ರ(ಎನ್ಓಸಿ) ಕೊಡ್ತಿದ್ದಾರೆ. ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿದ್ದು, ಹಾಸನ ನಗರ ನಾಶ ಆಗುತ್ತಿದೆ. ಆದರೆ ಹೇಳೋರು ಕೇಳೋರು ಯಾರೂ ಇಲ್ಲ. ರೌಡಿಗಳು ಚಾಕು ತೋರಿಸಿ ಹೆದರಿಸುತ್ತಿದ್ದಾರೆ. ಸರ್ಕಾರ ಖಾಸಗಿಯವರ ಜೊತೆ ಶಾಮೀಲಾದಂತೆ ಕಾಣುತ್ತಿದೆ ಎಂದು ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಯತ್ನಾಳ್ ಕ್ಷಮೆ ಕೇಳಬೇಕು:
ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಮಾತನಾಡಿದ ಬಿಜೆಪಿ ಸಚಿವ ಯತ್ನಾಳ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದೊರೆಸ್ವಾಮಿ ಪಾಕ್ ಏಜೆಂಟ್, ದೇಶದ್ರೋಹದ ಪೋಸ್ಟ್ ಹಾಕಿದ್ರೆ ಬೀಳುತ್ತೆ ಗುಂಡೇಟು: ಯತ್ನಾಳ್ ವಾರ್ನಿಂಗ್
ದೊರೆಸ್ವಾಮಿ ಬಗ್ಗೆ ಅತೀ ಹೆಚ್ಚಿನ ಗೌರವ ತೋರಿಸಬೇಕು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಎಲ್ಲಿಯೇ ಅನ್ಯಾಯ ಆದರೂ ಹೋರಾಡುತ್ತಾರೆ. ಯತ್ನಾಳ್ ಬಗ್ಗೆ ಗೌರವ ಇದೆ. ಅವರ ಬಾಯಲ್ಲಿ ಈ ರೀತಿ ಮಾತು ಬರಬಾರದಿತ್ತು. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಯತ್ನಾಳ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಯುವಕರಿಗೆ ದಾರಿದೀಪವಾಗಿರುವ ದೊರೆಸ್ವಾಮಿಯನ್ನು ನಿಂದಿಸಿದ ಯತ್ನಾಳ್ರನ್ನು ಜೈಲಿಗೆ ಹಾಕಿ – ಜಾಲತಾಣಗಳಲ್ಲಿ ಪೋಸ್ಟ್