ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇಂದು ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೇವಣ್ಣ ಅವರು ಜೈಲಿನಿಂದ ಹೊರ ಬಂದರು. ರೇವಣ್ಣ ಅವರು ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳತ್ತ ಕೈ ಮುಗಿದು ಮುಂದೆ ಸಾಗಿದರು. ರೇವಣ್ಣ ಬರುವಿಕೆಗಾಗಿ ಅಭಿಮಾನಿಗಳು ಜೈಲಿನ ಹೊರಗೆ ಕಾಯುತ್ತಿದ್ದರು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಜೈಲಿನಿಂದ ಹೊರಬಂದ ರೇವಣ್ಣ ಅವರಿಗೆ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ರೇವಣ್ಣ ಬರುತ್ತಿದ್ದಂತೆಯೇ ನೂಕುನುಗ್ಗಲು ಆರಂಭವಾಗಿದೆ. ಕಾರ್ಯಕರ್ತರು ಕಾರಿಗೆ ಅಡ್ಡ ಬಂದಿದ್ದರಿಂದ ಕಾರ್ ಮೂವ್ ಮಾಡಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹೀಗಾಗಿ ಕಾರಿನ ಗ್ಲಾಸ್ ಇಳಿಸಿ ಕೈ ಮುಗಿದು ಹೊರಟರು.
ಸಂತ್ರಸ್ತೆಯ ಕಿಡ್ನಾಪ್ ಆರೋಪ ಎದುರಿಸುತ್ತಿದ್ದ ರೇವಣ್ಣ ಅವರು 6 ದಿನಗಳ ಹಿಂದೆ ಜೈಲು ಸೇರಿದ್ದರು. ನಿನ್ನೆ ಇಡೀ ದಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ಸಂಜೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿತ್ತು.