ಹಾಸನ: ಸಚಿವ ಹೆಚ್.ಡಿ ರೇವಣ್ಣ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೊಗಳಿದ್ದು ಕಾಂಗ್ರೆಸ್ ಪಕ್ಷದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಪರಿಷತ್ ಸದಸ್ಯೆಯಾಗಿರುವ ಜಯಮಾಲಾ ಭಾಷಣ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಂತ್ರಿ ಪದವಿ ಉಳಿಸಿಕೊಳ್ಳುವುದಕ್ಕಾಗಿ ದೇವೇಗೌಡರನ್ನು ಓಲೈಸಿಕೊಳ್ಳಲು ಈ ಹೇಳಿಕೆ ಕೊಟ್ಟಿದ್ದಾರೆ ಎಂದು ಜಯಮಾಲಾ ವಿರುದ್ಧ ನೇರವಾಗಿ ಆರೋಪ ಮಾಡಿದರು.
ಇಂದು ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಎ. ಮಂಜು ಸಿನಿಮಾದವರು ಅವರನ್ನು ಹಾಡಿ ಹೊಗಳಿದ್ದಾರೆ. ಅದು ನಟನೆ ಅಷ್ಟೇ. ಅದು ರಿಯಾಲಿಟಿ ಅಲ್ಲ ಎಂದು ವ್ಯಂಗ್ಯವಾಡಿದರು. ಸಚಿವೆ ಜಯಮಾಲಾಗೆ ಅನುಭವದ ಕೊರತೆ ಇದೆ. ಈಗ ಮಂತ್ರಿಯಾಗಿದ್ದಾರೆ. ಅವರು ಭಾಗವಹಿಸಿದ್ದು ಪೂಜ್ಯ ಸ್ವಾಮೀಜಿಗಳಿಗೆ ಶಾಂತಿ ಪ್ರಶಸ್ತಿಯನ್ನು ನೀಡಲು. ಆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಸಾಧನೆ ಕುರಿತು ಮಾತನಾಡಬೇಕಿತ್ತು. ಈ ಪ್ರಶಸ್ತಿ ಅವರಿಗೆ ನೀಡಲಿಕ್ಕೆ ಕಾರಣವೇನು ಎನ್ನುವುದರ ಕುರಿತು ಮಾತನಾಡಬೇಕಿತ್ತು, ಅವರಿಗೆ ಶುಭ ಕೋರಬೇಕಿತ್ತು. ಆದರೆ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪನವರನ್ನು ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳ ಹೇಳಿಕೆಯಿಂದ ಹೆದರಿ ಈ ರೀತಿ ಗೌಡರ ಕುಟುಂಬಕ್ಕೆ ಹತ್ತಿರವಾಗಲು ಈ ರೀತಿ ಮಾತನಾಡಿದ್ದಾರೆ ವಿನಃ ಪಕ್ಷದ ಹೇಳಿಕೆ ಅಲ್ಲ ಎಂದರು. ಇದನ್ನೂ ಓದಿ: ಸಚಿವ ರೇವಣ್ಣರನ್ನ ಹೊಗಳಿ, ಸ್ವಪಕ್ಷೀಯರಿಗೆ ಸಚಿವೆ ಜಯಾಮಾಲಾ ಟಾಂಗ್
ಪಕ್ಷವನ್ನು ಕಡೆಗಣಿಸಿ ತಮ್ಮ ಮಂತ್ರಿ ಪದವಿ ಉಳಿಸಿಕೊಳ್ಳಲು ಮತ್ತು ಯಾರನ್ನೋ ಓಲೈಸಿಕೊಳ್ಳಲು ಈ ಹೇಳಿಕೆ ಕೊಟ್ಟಿದ್ದಾರೆ. ಇದು ಮಹಾ ತಪ್ಪು ಎಂದು ಅಸಮಧಾನ ವ್ಯಕ್ತಪಡಿಸಿದರು. ನನಗೂ ಕೂಡ ಜಯಮಾಲಾ ಹತ್ತಿರದವರೇ ಆದರೆ ಅವರಿಗೆ ಪಕ್ಷದ ಕುರಿತು ಕಾಳಜಿ ಇಲ್ಲವೆನ್ನುವುದು ಇಲ್ಲಿ ಸಾಬೀತಾಗಿದೆ. ಕೆಪಿಸಿಸಿ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ ದೂರು ನೀಡುತ್ತೇನೆ. ಈ ಹಿಂದೆ ಸಚಿವ ಮಹದೇವಪ್ಪನವರ ವಿರುದ್ಧವೂ ಕೆಪಿಸಿಸಿಗೆ ದೂರು ನೀಡಿದ್ದೆ. ಜಯಮಾಲಾ ವಿಚಾರವೂ ಹೇಳುತ್ತೇನೆ ಎಂದು ತಿಳಿಸಿದರು.
ಈಗ ಜಯಮಾಲಾ ಹೇಳಿರುವುದು ಅವರ ವೈಯುಕ್ತಿಕ ವಿಚಾರ, ಹಾಸನ ಜಿಲ್ಲೆಯಲ್ಲಿ ಮಾಜಿ ಪ್ರಧಾನಿಯನ್ನು ಸೋಲಿಸಿದ್ದಾರೆ. ರೇವಣ್ಣ ಅವರನ್ನು ಸೋಲಿಸಿದ್ದಾರೆ, ನನ್ನನ್ನೂ ಸೋಲಿಸಿದ್ದಾರೆ. ಆದರೆ ಜಯಮಾಲಾ ರವರು ಒಂದೂ ಚುನಾವಣೆಗೆ ನಿಲ್ಲದೇ ಈ ರೀತಿ ಹೇಳಿರುವುದು ಅವರಿಗೆ ಅನುಭವದ ಕೊರತೆ ಇದೆ ಎನ್ನವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಉಪಚುನಾವಣೆಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಮಂಡ್ಯ ಎಲ್ಲಿಯೂ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ನ್ನು ತೆಗೆಯಲು ಯಾರಿಗೂ ಸಾಧ್ಯವಿಲ್ಲ, ನಮ್ಮ ಅಸ್ತಿತ್ವಕ್ಕಾಗಿ ನಮ್ಮ ಕೂಗು ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv