ಬೆಂಗಳೂರು: ಹಲವು ವರ್ಷಗಳಿಂದ ಅನಾನುಕೂಲಗಳನ್ನು ಎದುರಿಸಿದ ಕಂಪನಿ ಬೆಂಗಳೂರಿನ (Bengaluru) ಕುಂದುಕೊರತೆ, ವಿಫಲತೆಗಳ ಕುರಿತು ಮಾತನಾಡಿದರೆ ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್ (C.N Ashwath Narayan) ಅವರು ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಉದ್ಯಮಿಗಳ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರ ಡೋಂಟ್ ಕೇರ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇಂತಹ ಕಂಪನಿಗೆ ಬೇಕಿದ್ದರೆ ಇರಿ; ಇಲ್ಲದಿದ್ದರೆ ಹೋಗಿ ಎನ್ನುವುದಾದರೆ, ಇದ್ಯಾವ ಸಂಸ್ಕೃತಿ? ಇದು ಜನಪರ ಸರ್ಕಾರದ ಮಾತುಗಳೇ? ಈ ದುರಹಂಕಾರದ ಮಾತು ಬಿಟ್ಟು, ಜನಪರವಾಗಿ ಕೆಲಸ ಮಾಡಿ ವಿಶ್ವಾಸ ಮೂಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೇರೆ ಧರ್ಮಕ್ಕೆ ಮತಾಂತರ ಆದ್ರೆ ಮುಗೀತು, ಧರ್ಮದ ಜೊತೆ ಜಾತಿ ಸೇರಿಸುವಂತಿಲ್ಲ: ಸತೀಶ್ ಜಾರಕಿಹೊಳಿ
ಸರ್ಕಾರ ಎಂಬುದು ಜನಪರವಾಗಿರಬೇಕು. ಆಡಳಿತದಲ್ಲಿ ಸೌಜನ್ಯ, ಜನಪರ ಕಾಳಜಿ ಇರಬೇಕು. ಆದರೆ, ಕಾಂಗ್ರೆಸ್ಸಿನ ರಾಜ್ಯ ಸರಕಾರಕ್ಕೆ ಅಧಿಕಾರ ತಲೆಗೆ ಹತ್ತಿದೆ. ದುರಹಂಕಾರದ ಮಾತು ಆಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನರು ಎತ್ತಿ ಹಿಡಿದಾಗ ಅದನ್ನು ಒಪ್ಪಿಕೊಳ್ಳುವ ಸೌಜನ್ಯ, ಸಂಸ್ಕೃತಿ ಅವರಲ್ಲಿಲ್ಲ ಎಂದು ದೂರಿದರು.
ಬೆಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ಹೆಮ್ಮೆಯ ನಗರವಾಗಿದೆ. ಉದ್ಯಮಶೀಲತೆ, ತಂತ್ರಜ್ಞಾನ, ಸ್ಟಾರ್ಟಪ್ಗೆ ಹೆಸರುವಾಸಿಯಾಗಿದೆ. ಎಲ್ಲ ಪ್ರಧಾನಮಂತ್ರಿಗಳು, ಮಾನ್ಯ ರಾಷ್ಟ್ರಪತಿಗಳು, ವಿಶ್ವ ನಾಯಕರು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಾರೆ. ಬೆಂಗಳೂರಿನ ವೈಫಲ್ಯವನ್ನು ತಿಳಿಸಿ, ಕುಂದುಕೊರತೆ ಹೇಳಿದಾಗ ಅದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಎಂ.ಬಿ ಪಾಟೀಲ್