ನವದೆಹಲಿ: 1984ರಲ್ಲಿ ನಡೆದಿದ್ದ ಸಿಖ್ಖರ ಮೇಲೆ ನಡೆದಿದ್ದ ಹಿಂಸಾಚಾರದಲ್ಲಿ (Anti-Sikh Riots Case) ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದಿದ್ದ ಇಬ್ಬರು ವ್ಯಕ್ತಿಗಳ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ನ (Congress) ಮಾಜಿ ಸಂಸದ ಸಜ್ಜನ್ ಕುಮಾರ್ (Sajjan Kumar) ಅವರನ್ನು ದೆಹಲಿ ನ್ಯಾಯಾಲಯ (Delhi Court) ದೋಷಿ ಎಂದು ತೀರ್ಪು ನೀಡಿದೆ.
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರಿದ್ದ ಪೀಠ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಫೆಬ್ರವರಿ 18 ರಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಲಿದೆ.
ಇಂದು (ಫೆ.12) ತೀರ್ಪಿನ ಸಲುವಾಗಿ ಕುಮಾರ್ ಅವರನ್ನು ತಿಹಾರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣವು ನವೆಂಬರ್ 1, 1984 ರಂದು ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣದೀಪ್ ಸಿಂಗ್ ಅವರ ಹತ್ಯೆಗಳಿಗೆ ಸಂಬಂಧಿಸಿದ್ದಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರವಾಗಿ ಸಿಖ್ಖರ ಮೇಲೆ ದೊಡ್ಡ ದಾಳಿ ನಡೆದಿತ್ತು. ಈ ವೇಳೆ ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಪಾಸ್ತಿಗಳ ನಾಶ ಮಾಡಲಾಗಿತ್ತು. ಇದೇ ವೇಳೆ ಜನ ಸಮೂಹ ಜಸ್ವಂತ್ ಅವರ ಮನೆಯ ಮೇಲೆ ದಾಳಿ ಮಾಡಿ, ಆವರನ್ನು ಮತ್ತು ಅವರ ಮಗನನ್ನು ಕೊಂದು, ವಸ್ತುಗಳನ್ನು ಲೂಟಿ ಮಾಡಿ ಅವರ ಮನೆಯನ್ನು ಸುಟ್ಟುಹಾಕಿತು ಈ ಪ್ರಕರಣ ಪಂಜಾಬ್ನ ಬಾಗ್ ಪೊಲೀಸ್ ಠಾಣೆ ದಾಖಲಾಗಿತ್ತು. ನಂತರ ವಿಶೇಷ ತನಿಖಾ ತಂಡವು ತನಿಖೆಯನ್ನು ವಹಿಸಿಕೊಂಡಿತು. ಬಳಿಕ 2021ರ ಡಿ.16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪಗಳನ್ನು ಹೊರಿಸಿತ್ತು.
ಪ್ರಕರಣದಲ್ಲಿ ಸಜ್ಜನ್ ಕುಮಾರ್ ಗಲಭೆ ನಡೆಸಿದ ಗುಂಪಿನ ನೇತೃತ್ವ ವಹಿಸಿದ್ದರು ಎಂಬುದಕ್ಕೆ ತನಿಖಾ ತಂಡ ಸಾಕಷ್ಟು ಪುರಾವೆಗಳನ್ನು ಒದಗಿಸಿತ್ತು.