ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜನ್ಮ ದಿನವಾಗಿದ್ದು, ರಾಜಕೀಯ ಪಕ್ಷದ ನಾಯಕರು, ಸಂಬಂಧಿಗಳು ಹೀಗೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರೀತಿಯ ಯಡಿಯೂರಪ್ಪ ಅವರಿಗೆ 77ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ರಾಜಕೀಯ ಹೋರಾಟವನ್ನೇ ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡು ಯಶಸ್ಸನ್ನು ಸಾಧಿಸಿದ ನಿಮಗೆ, ಇನ್ನಷ್ಟು ಕಾಲ ಪಕ್ಷಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಒದಗಿ ಬರಲಿ, ಜೊತೆಗೆ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಆಶಿಸುವೆ ಎಂದು ತಿಳಿಸಿದ್ದಾರೆ.
ಪ್ರೀತಿಯ @BSYBJP ಅವರಿಗೆ 77ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ರಾಜಕೀಯ ಹೋರಾಟವನ್ನೇ ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡು ಯಶಸ್ಸನ್ನು ಸಾಧಿಸಿದ ನಿಮಗೆ, ಇನ್ನಷ್ಟು ಕಾಲ ಪಕ್ಷಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಒದಗಿ ಬರಲಿ,
ಜೊತೆಗೆ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಆಶಿಸುವೆ. pic.twitter.com/IGz9Dbv0dh
— Siddaramaiah (@siddaramaiah) February 27, 2020
ಸಿಎಂ ಯಡಿಯೂರಪ್ಪ ಅವರು ತಮ್ಮ ಹುಟ್ಟುಹಬ್ಬವಾದ ಇಂದೇ ಅದೃಷ್ಟದ ಮನೆಗೆ ಕಾಲಿಡುತ್ತಿದ್ದಾರೆ. ಸರ್ಕಾರಿ ಬಂಗಲೆ ತಮ್ಮ ಅದೃಷ್ಟದ ಕಾವೇರಿ ನಿವಾಸಕ್ಕೆ ಯಡಿಯೂರಪ್ಪ ಅವರು ಪೂಜೆ ಮಾಡಿದ್ದಾರೆ. ಇಂದು ಮುಂಜಾನೆಯೇ ಬಿಎಸ್ವೈ ಅವರು ತಮ್ಮ ಅದೃಷ್ಟದ ಮನೆಗೆ ಎಂಟ್ರಿ ಕೊಟ್ಟಿದ್ದು, ಗೃಹ ಪ್ರವೇಶ ಪೂಜೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದರು ಕಾವೇರಿ ನಿವಾಸದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಾಸವಿದ್ದರು. ಸಿದ್ದರಾಮಯ್ಯರ ಮನೆ ಖಾಲಿ ಮಾಡಿದ್ದು, ಇಂದು ಬಿಎಸ್ ವೈ ಕಾವೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಕಿ ಮನೆ ಎಂದು ಬಿಎಸ್ವೈ ಖುಷಿಖುಷಿಯಾಗಿ ಗೃಹ ಪ್ರವೇಶ ಪೂಜೆ ಮಾಡಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಸಂಜೆ ಅರಮನೆ ಮೈದಾನದ ವೈಟ್ಪೆಟಲ್ಸ್ ಸಭಾಂಗಣದಲ್ಲಿ ಸಂಜೆ ಸಿಎಂಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಯಾರೂ ಕೂಡ ಹಾರ-ತುರಾಯಿ, ಕಾಣಿಕೆಗಳನ್ನು ತರಬಾರದು ಎಂದು ಆಪ್ತೇಷ್ಠರಿಗೆ ಟ್ವಿಟ್ಟರ್ ಮೂಲಕ ಸಿಎಂ ಮನವಿ ಮಾಡಿ, ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ ಎಂದು ಅಭಿಮಾನಿಗಳಿಗೆ ಹೇಳಿದ್ದರು.