ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯ, ಅಧ್ಯಕ್ಷ ಆದ್ರೆ ಸಾಕು ಜನರಿಗೆ ಅಹಂ ಬಂದು ಬಿಡುತ್ತದೆ. ಅದೆಲ್ಲವನ್ನೂ ಮೀರಿ ನಿಂತವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ (D.V Sadananda Gowda) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಿಂಗ್ 10 ವರ್ಷ ಸಿಂಗ್ ಪ್ರಧಾನಿಯಾಗಿದ್ದರೂ ಸಹ ಅಹಂ ಅವರ ಬಳಿ ಸುಳಿಯಲಿಲ್ಲ. ಈಗ ಯಾವುದೇ ಪಾರ್ಟಿಯಾಗಲಿ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಆದ್ರೂ ಸಾಕು ಅವರ ಅಹಂ ನೋಡೋಕೆ ಆಗಲ್ಲ. ಅದೆಲ್ಲವನ್ನೂ ಮೀರಿ ನಿಂತವರು ಸಿಂಗ್. ಅವರು ಎಂದು ರಾಜಕಾರಣ ಮಾಡಿಲ್ಲ, ಎಲ್ಲರ ಜೊತೆ ಬಹಳ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದ ಘನತೆ ಉಳಿಸಿಕೊಂಡಿದ್ದರು. ಅವರ ವಿರುದ್ಧ ತಿರುಗಿ ಬಿದ್ದರೂ ವಿಚಲಿತರಾಗದೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಅವರು ದೇಶದ ಉತ್ಕೃಷ್ಟ ರಾಜಕಾರಣಿ. ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ, ಇಂದಿರಾ ಗಾಂಧಿಯವರ ಕೈಗೊಂಬೆ ಎಂದು ಅನಿಸಿಕೊಂಡ್ರೂ ಸಹ, ಅಂತಹ ಪರಿಸ್ಥಿತಿಯನ್ನು ದೇಶದ ಹಿತಾಸಕ್ತಿಗೆ ಪೂರಕವಾಗಿ ಅವರು ಪರಿವರ್ತಿಸಿದ್ದರು ಎಂದಿದ್ದಾರೆ.