ನವದೆಹಲಿ: ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕನ್ನು ನಿಯಂತ್ರಿಸುವುದು ಅಸಾಧ್ಯ. ಪ್ರತಿಯೊಬ್ಬರಿಗೂ ಈ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಕ್ಷೇತ್ರದ ಐಸಿಎಂಆರ್ ವೈದ್ಯರೊಬ್ಬರು ತಿಳಿಸಿದ್ದಾರೆ.
ವ್ಯಾಪಕವಾಗಿ ಹರಡುತ್ತಿರುವ ಈ ಸೋಂಕನ್ನು ನಿಯಂತ್ರಿಸಲು ಬೂಸ್ಟರ್ ಡೋಸ್ನಿಂದಲೂ ಸಾಧ್ಯವಿಲ್ಲ. ಯಾವುದೇ ವ್ಯತ್ಯಾಸವಿಲ್ಲದೇ, ವಿಶ್ವದ ಎಲ್ಲಾ ದೇಶಗಳಲ್ಲೂ ಓಮಿಕ್ರಾನ್ ತೀವ್ರಗತಿಯಲ್ಲಿ ಹರಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಾ.ಜಯಪ್ರಕಾಶ್ ಮುಲಿಯಿಲ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ
ಇನ್ನು ಮುಂದೆ ಕೋವಿಡ್ ಭಯಾನಕ ರೋಗವಾಗಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಹೊಸ ತಳಿ ತನ್ನ ಪರಿಣಾಮದಲ್ಲಿ ಸೌಮ್ಯವಾಗಿದೆ. ಈ ಸೋಂಕಿಗೆ ತುತ್ತಾದವರಲ್ಲಿ ಕಡಿಮೆ ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಾವು ನಿಭಾಯಿಸಬಲ್ಲ ಕಾಯಿಲೆ ಇದಾಗಿದೆ. ಇದು ಡೆಲ್ಟಾಗಿಂತ ಹೆಚ್ಚು ಸೌಮ್ಯವಾಗಿದೆ. ಈ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತರೆ ದೇಶಗಳಂತೆ ಭಾರತದಲ್ಲಿ ಸೋಂಕು ತೀವ್ರತರವಾದ ಪರಿಣಾಮ ಬೀರಿಲ್ಲ. ದೇಶದಲ್ಲಿ ಲಸಿಕೆಯನ್ನು ಪರಿಚಯಿಸುವ ಮೊದಲೇ ಸಾಕಷ್ಟು ಮಂದಿ ಸೋಂಕಿಗೆ ಒಳಗಾಗಿದ್ದರು. ಯಾವುದೇ ವೈದ್ಯಕೀಯ ಸಂಸ್ಥೆಗಳು ಬೂಸ್ಟರ್ ಡೋಸ್ಗಳನ್ನು ನೀಡಲು ಸೂಚಿಸಿಲ್ಲ. ಇದರಿಂದ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ 3ನೇ ಅಲೆ – ರಾಜ್ಯಗಳ ಜೊತೆ ನಾಳೆ ಮೋದಿ ಸಭೆ
ವೈರಸ್ ಕೇವಲ ಎರಡು ದಿನಗಳಲ್ಲಿ ಸೋಂಕನ್ನು ದ್ವಿಗುಣಗೊಳಿಸುತ್ತದೆ. ಪರೀಕ್ಷಿಸಿ ಸೋಂಕನ್ನು ದೃಢಪಡಿಸುವ ಮೊದಲೇ ಸೋಂಕಿತ ಹೆಚ್ಚಿನ ಸಂಖ್ಯೆಯ ಜನರಿಗೆ ಅದನ್ನು ಹರಡಿರುತ್ತಾನೆ. ಈ ರೀತಿಯ ಸಾಂಕ್ರಾಮಿಕ ವಿಕಾಸದಲ್ಲಿ ನೀವು ಯಾವುದೇ ವ್ಯತ್ಯಾಸ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮಲ್ಲಿ ಬಹುಪಾಲು ಜನರಿಗೆ ನಾವು ಸೋಂಕಿಗೆ ಒಳಗಾಗಿದ್ದೇವೆ ಎಂದು ತಿಳಿದಿರುವುದೇ ಇಲ್ಲ. ಶೇ.80ಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರೂ ಆ ಬಗ್ಗೆ ತಿಳಿದಿರುವುದಿಲ್ಲ ಎಂದು ತಿಳಿಸಿದ್ದಾರೆ.