ಕಾರವಾರ: ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡಾಡ್ತಾ ಇದ್ದಾರೆ. ಎಲ್ಲರೂ ನಂಗೆ ಟಿಕೆಟ್ ಸಿಕ್ಕಿದೆ ನಂಗೆ ಟಿಕೆಟ್ ಸಿಕ್ಕಿದೆ ಅಂತಾರೆ. ನನ್ನ ಹತ್ರಾ ಅಂತೂ ಟಿಕೆಟ್ ಇಲ್ಲ. ನಮ್ಮ ಹೈಕಮಾಂಡ್ ಟಿಕೆಟ್ ಕೊಡ್ತಾರೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anant Kumar Hegde) ಹೇಳಿದರು.
ಸೋಮವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಳ್ಳಿ ಗ್ರಾಮದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಎಲ್ಲೆಲ್ಲಿ ನಮ್ಮ ಧರ್ಮಕ್ಕೆ ಅಪಮಾನ ಆಗಿದೆ, ಅದಕ್ಕೆಲ್ಲ ಪರಿಹಾರ ಸಿಗುವ ಕೆಲಸ ಆಗಬೇಕಿದೆ. ಈ ಒಂದೇ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಷ್ಟೆ ಅಲ್ಲ, ಮುಂದಿನ ಶತಮಾನಗಳ ಕಾಲ ಬಿಜೆಪಿ ಗೆಲುವು ಸಾಧಿಸಲಿದೆ. ನಾವು ಅಷ್ಟೊತ್ತು ಇರ್ತಿವೊ ಇಲ್ವೊ ಗೊತ್ತಿಲ್ಲ ಕಣ್ರಿ. ಎಷ್ಟೋ ಜನ ನಮಗೆ ಟಿಕೆಟ್ ಸಿಕ್ಕಿದೆ ಅಂತಾ ಓಡಾಡುತ್ತಾ ಇದ್ದಾರೆ. ಬಿಜೆಪಿಯಷ್ಟು ಕಾಂಗ್ರೆಸ್ ನಲ್ಲಿ ಅಷ್ಟೊಂದು ಇಲ್ಲ, ಕಾಂಗ್ರೆಸ್ ನಲ್ಲಿ ಸ್ವಲ್ಪ ಕನ್ಫ್ಯೂಸ್ ಇದೆ ಎಂದರು.
ಬಿಜೆಪಿ ಅಭ್ಯರ್ಥಿ ಯಾರು ಆಗ್ತಾರೆ ಎಂಬುವುದು ನಂಗೂ ಗೊತ್ತಿಲ್ಲ. ಯಾರೇ ಸ್ಪರ್ಧಿಸಿದ್ರೂ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿ. ಆರು ಬಾರಿ ಗೆಲ್ಲಿಸಿದ್ದೀರಿ, ಇದಕ್ಕಿಂತ ಜಾಸ್ತಿ ಇನ್ನೇನು ಬೇಕು? ಮನುಷ್ಯನ ಆಸೆಗೂ ಒಂದು ಮಿತಿ ಇರಬೇಕು ಅಲ್ವಾ..?. ಇಷ್ಟು ವರ್ಷಗಳ ಕಾಲ ಗೆಲ್ಲಿಸಿದ್ದಕ್ಕೆ ನಿಮಗೆಲ್ಲ ನಮಸ್ಕಾರ ಎಂದರು.
ನನಗೆ ರಾಜಕೀಯವೇ ಬೇಡ ಅಂತಾ ಸುಮ್ಮನಿದ್ದೆ, ಆದರೆ ಭಟ್ಕಳ, ಕಾರವಾರ ಎಲ್ಲೆಲ್ಲಿಂದಲೋ ಬಂದು ನನಗೆ ಒತ್ತಾಯ ಮಾಡಿದ್ರು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದ ರಾಜ್ಯಸಭಾ ಸಂಸದ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ