ಚೆನ್ನೈ: ಮರಣದಂಡನೆಯ ಅಗತ್ಯವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೆರಾರಿವಾಲನ್ ಅಭಿಪ್ರಾಯಪಟ್ಟಿದ್ದಾನೆ.
ಹತ್ಯೆ ಪ್ರಕರಣದಲ್ಲಿ 31 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪೆರಾರಿವಾಲನ್ನನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶ ಹೊರಡಿಸಿತು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಪೆರಾರಿವಾಲನ್ ಮಾತನಾಡಿದ್ದಾನೆ.
ನಾನು ಈಗಷ್ಟೇ ಹೊರಬಂದಿದ್ದೇನೆ. ಇದು 31 ವರ್ಷಗಳ ಕಾನೂನು ಹೋರಾಟ. ನಾನು ಸ್ವಲ್ಪ ಉಸಿರಾಡಬೇಕಾಗಿದೆ. ನನಗೆ ಸ್ವಲ್ಪ ಸಮಯ ನೀಡಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾನೆ. ಇದನ್ನೂ ಓದಿ: 31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ
ಮರಣದಂಡನೆಯ ಅಗತ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಅನೇಕ ನ್ಯಾಯಮೂರ್ತಿಗಳು ಹಾಗೆ ಹೇಳಿದ್ದಾರೆ. ಎಲ್ಲರೂ ಮನುಷ್ಯರೇ ಎಂದು ಹೇಳಿಕೆ ನೀಡಿದ್ದಾನೆ.
ಅನೇಕ ಅಪರಿಚಿತರು ನಮಗೆ ಬೆಂಬಲ ನೀಡಿದ್ದಾರೆ. ನನಗೆ ತುಂಬಾ ಜನರ ಪರಿಚಯವಿಲ್ಲ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಪಿತಾಮಹ: ಬಿಜೆಪಿ
1991ರ ಮೇ 21ರಂದು ರಾಜೀವ್ ಗಾಂಧಿ ಅವರು ಎಲ್ಟಿಟಿಇ ಉಗ್ರರಿಂದ ತಮಿಳುನಾಡಿನಲ್ಲಿ ಹತ್ಯೆಗೀಡಾದರು. ಆರಂಭದಲ್ಲಿ ಚೆನ್ನೈ ವಿಶೇಷ ನ್ಯಾಯಾಲಯವು ಪೆರಾರಿವಾಲನ್ಗೆ ಮರಣದಂಡನೆಯನ್ನು ವಿಧಿಸಿತ್ತು. ನಂತರ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.