ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈಬಿಟ್ಟರೂ ನಾವು ಕೈ ಬಿಡಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಕಾಲೆಳೆದಿದ್ದಾರೆ.
ಮೈಸೂರಿನ ಅರಮನೆಯಲ್ಲಿ ಮಾಧ್ಯಮಗಳ ಬಿಜೆಪಿ ನಾಯಕರು ಮಾತನಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯರನ್ನ ದಸರಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವಿ. ಸೋಮಣ್ಣ, ಸಿದ್ದರಾಮಯ್ಯರನ್ನು ಸೇರಿಸಿಕೊಂಡೆ ದಸರಾ ಮಾಡುತ್ತೇವೆ. ಸಿದ್ದರಾಮಯ್ಯ ದಿನನಿತ್ಯ ನನ್ನ ಸಂಪರ್ಕದಲ್ಲಿ ಇದ್ದಾರೆ. ಆಹ್ವಾನ ಪತ್ರಿಕೆ ಇನ್ನು ಮುದ್ರಣಕ್ಕೆ ಹೋಗಿಲ್ಲ. ಅವರನ್ನು ಆಹ್ವಾನಿಸಿಯೇ ದಸರಾ ಮಾಡುತ್ತೇವೆ. ನೀವು ಬನ್ನಿ ನಿಮ್ಮ ಜೊತೆ ಸಿದ್ದರಾಮಯ್ಯರ ಮನೆಗೆ ಹೋಗುತ್ತೇನೆ ಎಂದು ಹೇಳಿದರು. ಅವರ ಮಾತಿನ ಮಧ್ಯೆ ಮಾತನಾಡಿ ಸಿದ್ದರಾಮಯ್ಯ ಅವರು ಮೈಸೂರಿನವರು ಅವರೇ ಅತಿಥಿ. ಕಾಂಗ್ರೆಸ್ ಅವರನ್ನು ಕೈ ಬಿಟ್ಟರು ನಾವು ಬಿಡಲ್ಲ ಎಂದು ಸಿಟಿ ರವಿ ಅವರು ಟಾಂಗ್ ಕೊಟ್ಟರು.
ಈ ಮುಂಚೆ ಮಾಧ್ಯಮಗಳ ಜೊತೆ ಸಿಟಿ ರವಿ ಅವರು ಮಾತನಾಡಿ, ಭ್ರಷ್ಟಾಚಾರ ನಡೆಸದಿದ್ದರೆ ಯಾಕೆ ಹೆದರಬೇಕು. ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೆ ಭಯ ಇರುತ್ತೆ. ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದೆ ತಪ್ಪಾ? ತನಿಖೆ ನಡೆಸುವುದೇ ಇಲಿ ಹಿಡಿಯುವುದು ಎಂದು ಸಿದ್ದರಾಮಯ್ಯ ಹೇಳಿದರೆ ಅದಕ್ಕೆ ಏನ್ ಹೇಳಬೇಕು ಹೇಳಿ ಎಂದು ಪ್ರಶ್ನಿಸಿ ಮಾಜಿ ಸಿಎಂಗೆ ತಿರುಗೇಟು ಕೊಟ್ಟಿರು.
ನಾನು ಒಕ್ಕಲಿಗ ಸಮುದಾಯದವನು. ನನ್ನ ಸಮುದಾಯದ ನಾಯಕರಿಗೆ ಹೇಳುತ್ತೇನೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಭಾವನಾತ್ಮಕವಾಗಿ ಯೋಚನೆ ಮಾಡಬೇಡಿ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ. ವಾಸ್ತವಿಕವಾಗಿ ಯೋಚನೆ ಮಾಡಿ. ಬಂಧನ ಸಮುದಾಯದ ವಿರುದ್ಧ ಎಂದು ಯಾಕೆ ಹೇಳುತ್ತೀರಾ? ನನ್ನ ಮನೆಯಲ್ಲಿ 10 ಕೋಟಿ ದುಡ್ಡು ಸಿಕ್ಕರೆ ನಾನು ಪ್ರಾಮಾಣಿಕ ಎಂದು ಹೇಗೆ ಹೇಳಿಕೊಳ್ಳಲು ಆಗುತ್ತದೆ? ನನ್ನ ಆಸ್ತಿ 18 ಎಕರೆ ಇದೆ. ಅದು 180 ಎಕರೆ ಆದರೆ ಉತ್ತರ ಕೊಡಬೇಕು. ಅದು 1880 ಎಕರೆ ಆದರೂ ಜನರಿಗೆ ಉತ್ತರ ಕೊಡಬಾರದು ಅಂದರೆ ಹೇಗೆ ಎಂದು ಕಿಡಿಕಾರಿದರು.
ಕೆಆರ್ಎಸ್ ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿ, ಈ ಯೋಜನೆಗೆ ನಮ್ಮ ವಿರೋಧ ಇಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾಗುವ ಯೋಜನೆಗೆ ನಾವು ವಿರೋಧ ಮಾಡಲ್ಲ. ಡಿಸ್ನಿಲ್ಯಾಂಡ್ ಯೋಜನೆ ಬ್ಲೂ ಪ್ರಿಂಟ್ನಲ್ಲೇ ಇದೆ. ಇದು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಯೋಜನೆ ಅಲ್ಲ. ಅದರೆ, ಯೋಜನೆ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ನನ್ನ ಖಾತೆಯ ಬಜೆಟ್ ಎಷ್ಟಿದೆ ಎಂದು ನಾನು ಬಹಿರಂಗವಾಗಿ ಹೇಳುವುದಿಲ್ಲ ಎಂದು ತಿಳಿಸಿದರು.
ಇಲಾಖೆ ಮಂತ್ರಿ ಆಕ್ಟೀವ್ ಆಗಿದ್ದರೆ ಇಲಾಖೆಯೂ ಆಕ್ಟೀವ್ ಆಗಿರುತ್ತದೆ. ಮಂತ್ರಿ ಸೋಮಾರಿಯಾದರೆ ಇಲಾಖೆಯ ಅಧಿಕಾರಿಗಳು ಸೋಮಾರಿಗಳಾಗುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯನ್ನು ವರ್ಷ ಪೂರ್ತಿ ಆಕ್ಟೀವ್ ಆಗಿ ಇಡುತ್ತೇನೆ ಎಂದು ಸಿಟಿ ರವಿ ಹೇಳಿದರು.