ತುಮಕೂರು: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳು ಕನ್ನಡ ಭಾಷೆಯಲ್ಲೇ ಅನುತ್ತೀರ್ಣವಾದ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಪಾವಗಡ ಪಟ್ಟಣದ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ವೀಣಾಬಾಯಿ ಕಲಾ ವಿಭಾಗದ ಉಳಿದ ಎಲ್ಲಾ ವಿಷಯಗಳಲ್ಲಿ 90 ಅಂಕ ಪಡೆದಿದ್ದಾಳೆ. ಆದರೆ ಕನ್ನಡದಲ್ಲಿ ಮಾತ್ರ ಕೇವಲ 10 ಅಂಕ ನೀಡಲಾಗಿದೆ. ಫಲಿತಾಂಶ ನೋಡಿ ಕಂಗಾಲಾದ ವೀಣಾಬಾಯಿ, ಶಿಕ್ಷಕರ ಸಲಹೆಯಂತೆ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರಿಸಿಕೊಂಡಿದ್ದಾಳೆ. ಆಗ ಮೌಲ್ಯಮಾಪಕರ ಎಡವಟ್ಟು ಬಹಿರಂಗವಾಗಿದೆ.
ಅಸಲಿಗೆ ವೀಣಾಬಾಯಿಗೆ 79 ಅಂಕ ಬಂದಿದೆ. ಉತ್ತರ ಪತ್ರಿಕೆಯಲ್ಲಿ ಅದು ಸರಿಯಾಗಿಯೇ ನಮೂದಾಗಿದೆ. ಆದರೆ ಮೌಲ್ಯ ಮಾಪಕ ಮಹಾಶಯ ರಿಸಲ್ಟ್ ಶೀಟಲ್ಲಿ ಮಾತ್ರ ಕೇವಲ 10 ಅಂಕವನಷ್ಟೇ ನಮೂದಿಸಿದ್ದಾನೆ.
ಇದೇ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿ ಆರ್.ರವಿ, ಕನ್ನಡ ವಿಷಯದಲ್ಲಿ ಇದೇ ರೀತಿ ಎಡವಟ್ಟಾಗಿ 15 ಅಂಕ ಕಡಿಮೆ ಬಂದಿದೆ. ಒಂದು ಫೋಟೋ ಪ್ರತಿ ತರಿಸಲು 530 ಕಟ್ಟಬೇಕಾಗುತ್ತದೆ. ಬಡ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವುದೇ ಕಷ್ಟ ಅಂತಹ ಸ್ಥಿತಿಯಲ್ಲಿ ಪರೀಕ್ಷಾ ಮಂಡಳಿಯವರು ಮಾಡುವ ತಪ್ಪಿಗೆ ವಿದ್ಯಾರ್ಥಿಗಳು ಮತ್ತೆ ಬೆಲೆ ತೆರಬೇಕೇ ಅನ್ನೋದು ಪೋಷಕರ ಪ್ರಶ್ನೆಯಾಗಿದೆ.