ಶಿವಮೊಗ್ಗ: ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 69ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಶುಭದಿನದ ಅಂಗವಾಗಿ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಇಂದು ಮುಂಜಾನೆ ನಗರದ ವಿನೋಬನಗರ ಮಾರುಕಟ್ಟೆ ಆವರಣಕ್ಕೆ ಆಗಮಿಸಿದ ಸಚಿವರು, ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅವರ ಅಭಿಮಾನಿಗಳು ಒಟ್ಟಿಗೆ ಸೇರಿ ರಸ್ತೆ ಹಾಗು ಚರಂಡಿ ಸ್ವಚ್ಛತೆ ನಡೆಸಿದರು. ಈ ಮೂಲಕ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಅಡಿ ಕೆಲಸ ಮಾಡಿದರು. ಈಶ್ವರಪ್ಪ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪೊರಕೆ ಹಿಡಿದು ವಿನೋಬನಗರದ ರಸ್ತೆ, ಚರಂಡಿ ಸ್ವಚ್ಛಗೊಳಿಸಿ ತಮ್ಮ ನೆಚ್ಚಿನ ನಾಯಕನಿಗೆ ಶುಭಕೋರಿ, ನಮೋ ಜನ್ಮದಿನವನ್ನು ಆಚರಿಸಿದರು.
ಹಾಗೆಯೇ ಮೋದಿ ಅವರಿಗಾಗಿ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದರು. ಈ ವೇಳೆ ಜಿ.ಟಿ ದೇವೇಗೌಡ ಸೇರಿದಂತೆ ಸಂಸದ ಪ್ರತಾಪ್ ಸಿಂಹ, ಎಲ್. ನಾಗೇಂದ್ರ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.
ಜಿ.ಟಿ ದೇವೇಗೌಡ ಅವರು ಬಿಜೆಪಿ ನಾಯಕರ ಜೊತೆ ಪೂಜೆಯಲ್ಲಿ ಭಾಗಿಯಾದಲ್ಲದೆ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಹೆಸರಿನಲ್ಲಿ ಅರ್ಚನೆ ಕೂಡ ಮಾಡಿಸಿದರು. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಯಕರು ಮೋದಿಗೆ ಶುಭ ಹಾರೈಸಿದರು.