ಬೆಳಗಾವಿ: ಒಂದು ಕಾಲದಲ್ಲಿ ಬಿಜೆಪಿ (BJP) ಗೆ ಶಕ್ತಿ ಇಲ್ಲದಾಗ ಸಂಘಟನೆ ಮಾಡಿದವರಲ್ಲಿ ಈಶ್ವರಪ್ಪ ಪ್ರಮುಖರು, ಅವರ ತೀರ್ಮಾನ ಅವರ ಪಕ್ಷದ ಬೆಳವಣಿಗೆ ಬಗ್ಗೆ ಟೀಕೆ ಮಾಡೋದು ಶೋಭೆ ತರುವಂತದ್ದಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
ಬೆಳಗಾವಿ (Belagavi) ಜಿಲ್ಲೆಯ ಸವದತ್ತಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ (KS Eshwarappa) ಅವರದ್ದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದವರು, ಅವರು ಇನ್ನೂ ಸ್ವಲ್ಪ ದಿನ ರಾಜಕಾರಣದಲ್ಲಿ ಇರಬೇಕಿತ್ತು. ನನ್ನ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಮಾಜಿ ಸಚಿವ ಲಕ್ಷ್ಮಣ ಸವದಿ (Laxman Savadi) ಕಾಂಗ್ರೆಸ್ ಹೋಗುವ ವಿಚಾರವಾಗಿ ಮಾತನಾಡಿ, ಟಿಕೆಟ್ ಹಂಚಿಕೆ ಬಿಜೆಪಿಗೆ ಸಂಬಂಧಿಸಿದ್ದು, ಚುನಾವಣೆ ವೇಳೆ ಭಿನ್ನಾಭಿಪ್ರಾಯ ಬರೋದು ಸಹಜ. ಅದು ಮೊದನಿಂದಲೂ ಬಂದಿದೆ. ಅದರ ಬಗ್ಗೆ ಟೀಕೆ ಮಾಡೋದು ಸರಿ ಅಲ್ಲ. ಅವರ ಪಕ್ಷ ತೀರ್ಮಾನ ಮಾಡುತ್ತೆ ಎಂದು ಹೇಳಿದರು. ಇದನ್ನೂ ಓದಿ: ಟಿಕೆಟ್ ನೀಡದಿದ್ರೂ ಸ್ಪರ್ಧೆ, 10 ವರ್ಷ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್
ಜೆಡಿಎಸ್ (JDS) ಎರಡನೇ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡ್ತೀವಿ ಎಂದ ಕುಮಾರಸ್ವಾಮಿ, ಭವಾನಿ ರೇವಣ್ಣರಿಗೆ ಟಿಕೆಟ್ ವಿಚಾರವಾಗಿ ಮಾಧ್ಯಮದವರ ಕನ್ನಡ ಪದಬಳಕೆ ಅರ್ಥವಾಗುವಂತೆ ಈಗಾಗಲೇ ಹೇಳಿದ್ದೇನೆ. ನಾವು ಇಂತದ್ದೇ ವ್ಯಕ್ತಿಯನ್ನ ಸೋಲಿಸುವ ಹಾಗಿಲ್ಲ. ಕಾರ್ಯಕರ್ತರೇ ಸೋಲಿಸುತ್ತಾರೆ ಅಂತ ಹೇಳಿದ್ದೆ ಎಂದರು.
ಈಗಲೂ ಅದನ್ನೇ ಹೇಳುತ್ತೇನೆ, ಭವಾನಿ ಸೋಲುತ್ತಾರೆ ಅಂತ ನನ್ನ ಹೇಳಿಕೆ ತಿರುಚಲಾಗಿದೆ. ಭವಾನಿ (Bhavani Revanna) ಹೆಸರು ನನ್ನ ಬಾಯಲ್ಲಿ ಬಂದೇ ಇಲ್ಲ ಎಂದ ಅವರು, ಒಂದೂವರೆ ವರ್ಷದಿಂದ ನಂದು ಒಂದೇ ಸ್ಟ್ಯಾಂಡ್, ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು. ಬಿ ಫಾರ್ಮ್ ಕೊಟ್ಟ ಮೇಲೆ ಯಾವ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟೆ ಅನ್ನೋದು ಗೊತ್ತಾಗುತ್ತೆ. ಅಲ್ಲಿಯವರೆಗೆ ಟಿಕೆಟ್ ವಿಷಯವನ್ನ ಮರೆತು ಬಿಡೋಣ ಎಂದರು.