– ಸಿದ್ದರಾಮಯ್ಯ, ಡಿಕೆಶಿ ಸ್ವರ್ಗದಲ್ಲಿದ್ದಾರೆ ಎಂದು ಮಾಜಿ ಸಚಿವ ವ್ಯಂಗ್ಯ
– ಕಾಂಗ್ರೆಸ್ನಲ್ಲಿ ದಿನಕ್ಕೊಬ್ಬ ಸಿಎಂ ಹುಟ್ಟಿಕೊಳ್ಳುತ್ತಿದ್ದಾರೆ ಎಂದ ಈಶ್ವರಪ್ಪ
ಬೆಂಗಳೂರು: ಮಧ್ಯಪ್ರದೇಶ, ಛತ್ತಿಸ್ಗಢ (Chhattisgarh), ರಾಜಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿದೆ. ಈ ನಡುವೆ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (Eshwarappa) ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ.
4 ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ನೋಡಿದ ಮೇಲೆ ನಮ್ಮ ದೇಶಕ್ಕೆ ಭವಿಷ್ಯ ಇದೆ ಅನ್ನಿಸಿದೆ. ಆದ್ರೆ ಕರ್ನಾಟಕದ ಮತದಾರರ (Karnataka Voters) ವಿಚಾರದಲ್ಲಿ ನಾವು ಮಾಡಿಕೊಂಡ ಮುಟ್ಟಾಳತನದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲಿಯೂ ಬಿಜೆಪಿ ಒಟ್ಟಾಗಿ ಹೋಗಿದ್ದರೆ, ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಅವಲೋಕನ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ (Karnataka BJP) ಒಟ್ಟಾಗಿ ಹೋಗದೇ ಇದ್ದದ್ದು, ನಮ್ಮ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಈ ನಡುವೆ ಕಾಂಗ್ರೆಸ್ ಬಡವರಿಗೆ ಕೊಟ್ಟ ಗ್ಯಾರಂಟಿಗಳನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು. ಇದೆಲ್ಲವೂ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ತೆಲಂಗಾಣ ಜನರ ಹೃದಯದಲ್ಲಿ ಗಾಂಧಿ ಕುಟುಂಬಕ್ಕೆ ವಿಶೇಷ ಸ್ಥಾನವಿದೆ – ಈ ಬಾರಿ ಸರ್ಕಾರ ನಮ್ಮದೇ ಎಂದ ಕಾಂಗ್ರೆಸ್ ಸಂಸದ
ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್ಗಢ ರಾಜ್ಯಗಳೂ ಸೇರಿದಂತೆ ಇಡೀ ದೇಶದಲ್ಲಿ ಗ್ಯಾರಂಟಿ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಯತ್ನಿಸಿತ್ತು. ಈ ಚುನಾವಣೆಗಳಲ್ಲಿ ಅದು ವಿಫಲವಾಗಿದೆ. ಅಲ್ಲದೇ ಹಿಂದೂ-ಮುಸ್ಲಿಮರ ಬಗೆಗಿನ ತುಷ್ಟೀಕರಣ ರಾಜಕೀಯ ಇವೆಲ್ಲವೂ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರು ಇಂದೇ ಪಾಠ ಕಲಿಯಬೇಕು. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನಾಯಕರು ಮಾಡಿದ ತಪ್ಪಿಗೆ ಕಾರ್ಯಕರ್ತರು ನೊಂದಿದ್ದಾರೆ. ಆದ್ದರಿಂದ ನಾವೆಲ್ಲ ಒಂದಾಗಿ ಮುಂದಿನ ಚುನಾವಣೆ ಎದುರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: 2 ದೊಡ್ಡ ರಾಜ್ಯಗಳಲ್ಲಿ ಗೆಲುವು ಸಿಕ್ಕಿದೆ, ಈ ಫಲಿತಾಂಶ ಮತ್ತೆ ಮೋದಿ ಪ್ರಧಾನಿ ಎಂದು ಹೇಳ್ತಿದೆ: ಮುನಿರತ್ನ
ಸಿದ್ದು, ಡಿಕೆಶಿ ಸ್ವರ್ಗದಲ್ಲಿದ್ದಾರೆ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸ್ವರ್ಗದಲ್ಲಿದ್ದಾರೆ. ನಮ್ಮ ಸ್ಥಾನ ಯಾರೂ ಕಸಿದುಕೊಳ್ಳಲಾಗದು ಎಂಬ ಭ್ರಮೆಯಲ್ಲಿದ್ದಾರೆ. ಈ ಭ್ರಮೆಯಿಂದ ಹೊರಬರಬೇಕಾದ್ರೆ ಮುಂದಿನ ಚುನಾವಣೆವರೆಗೆ ಕಾಯಬೇಕು ಎಂದಿದ್ದಾರೆ.
ಅಲ್ಲದೇ ಕಾಂಗ್ರೆಸ್ನಲ್ಲಿ ಪ್ರತಿದಿನ ಒಬ್ಬೊಬ್ಬ ಮುಖ್ಯಮಂತ್ರಿ ಹುಟ್ಟಿಕೊಳ್ಳುತ್ತಿದ್ದಾರೆ. ಸಂವಿಧಾನವನ್ನೇ ತಿದ್ದುಪಡಿ ಮಾಡಿ 224 ಮುಖ್ಯಮಂತ್ರಿಗಳನ್ನ ಮಾಡಿಬಿಟ್ಟರೆ ಯಾರಿಗೂ ಸಮಸ್ಯೆಯಿಲ್ಲ ಎಂದು ಲೇವಡಿ ಮಾಡಿದ್ದಾರೆ.