ಹಾವೇರಿ: ಚಾಮುಂಡೇಶ್ವರಿಯಲ್ಲಿ ಸೋತರೂ ಬುದ್ಧಿ ಬರಲಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಕಡಿಮೆ ಸ್ಥಾನ ಗೆದ್ದರೂ ಬುದ್ಧಿ ಬಂದಿಲ್ಲ. ಎಷ್ಟು ಚುನಾವಣೆಗಳಲ್ಲಿ ಸೋತ ಮೇಲೆ ಬುದ್ಧಿ ಬರುತ್ತದೆ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಒಂದೇ ಒಂದು ಎಂಪಿ ಸೀಟು ಬರುವುದಿಲ್ಲ ಎಂದರು. ಆದರೆ ಇಪ್ಪತ್ತೈದು ಸೀಟು ಬಂತು. ಉಪಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚಿನ ಸೀಟು ಬಂದವು. ಆಗಲೂ ಬುದ್ಧಿ ಬರಲಿಲ್ಲ. ಪ್ರಧಾನಿ ಟೀಕೆ ಮಾಡದಿದ್ದರೆ, ಸಿದ್ದರಾಮಯ್ಯಗೆ ತಿಂದಿರುವ ಅನ್ನ ಕರಗುವುದಿಲ್ಲ. ಮೋದಿ ಟೀಕೆ ಮಾಡುವ ನಾನೇ ದೊಡ್ಡ ನಾಯಕ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಹರಿಹಾಯ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ನಾಯಕರೇ ಸ್ವಾಗತ ಮಾಡಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿವೆ. ಜನರು ನಮ್ಮ ಜೊತೆಗಿದ್ದಾರೆ. ಇದನ್ನ ಕಾಂಗ್ರೆಸ್, ಜೆಡಿಎಸ್ ನವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಬಿಲ್ ಪಾಸಾಗಿದ್ದಕ್ಕೆ ಇಡೀ ದೇಶದಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರ ಕುತಂತ್ರ ರಾಜಕಾರಣ ನಡೆಯುವುದಿಲ್ಲ ಈಶ್ವರಪ್ಪ ಕಿಡಿಕಾರಿದರು.
ಎಲ್ಲ ಜಾತಿಯ ಸ್ವಾಮೀಜಿಗಳು ಅವರವರ ಜಾತಿಯವರು ಮಂತ್ರಿ, ಮುಖ್ಯಮಂತ್ರಿ, ಡಿಸಿಎಂ ಆಗಬೇಕೆಂಬ ಆಸೆ ಹೊಂದಿರುತ್ತಾರೆ. ಆದರೆ ಸಂವಿಧಾನದಲ್ಲಿ ಸಿಎಂ ಸ್ಥಾನ ಒಂದೇ ಇದೆ. ಡಿಸಿಎಂ, ಮಂತ್ರಿ ಆಗಲು ನಿಯಮವಿದೆ. ಅಲ್ಲದೆ ಗೃಹ ಸಚಿವ ಸೇರಿದಂತೆ ಯಾರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸ್ವಾಮೀಜಿಗಳ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಮಾಡಬೇಕಾದ ಎಲ್ಲ ಕೆಲಸವನ್ನೂ ಮಾಡುತ್ತಾರೆ ಎಂದರು.