ಬೀದರ್: ಯತ್ನಾಳ್ (Basanagouda Patil Yatnal) ಒಬ್ಬ ಜೋಕರ್, ಮಾನಸಿಕ ರೋಗಿಯಾಗಿದ್ದು ಅವರು ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳೋದು ಸೂಕ್ತ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ವ್ಯಂಗ್ಯವಾಡಿದ್ದಾರೆ.
ಬೀದರ್ನಲ್ಲಿ (Bidar) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಯತ್ನಾಳ್ ಅವರು ಬಸವಣ್ಣ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರಣಹೇಡಿ ಎಂಬಂತೆ ಬಿಂಬಿಸುತ್ತಿದ್ದಾರೆ. ಆರ್ಎಸ್ಎಸ್ (RSS) ಮನವೊಲಿಸಲು ಈ ರೀತಿ ಹೇಳಿಕೆಗಳನ್ನು ಅವರು ನೀಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ವೈಯಕ್ತಿಕ ಸ್ವಾರ್ಥ, ಪಕ್ಷದ ಆಂತರಿಕ ಕಲಹಕ್ಕಾಗಿ ಅವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ. ಯತ್ನಾಳ್ ಹೇಳಿಕೆ ಬಸವ ಅನುಯಾಯಿಗಳಿಗೆ ತೀವ್ರ ನೋವಾಗಿದೆ. ಅವರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಬಸವಣ್ಣ ನಮ್ಮೆಲ್ಲರ ಆರಾಧ್ಯ ದೈವ, ಅವರ ಕುರಿತಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಬಿಜೆಪಿಯವರಿಗೆ (BJP) ಬಸವಣ್ಣನವರ ಅನುಯಾಯಿಗಳ ಮತ ಬೇಕು, ಆದರೆ ಲಘುವಾಗಿ ಮಾತನಾಡಿರುವ ಯತ್ನಾಳ್ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಯತ್ನಾಳ್ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಲು ಬಿಜೆಪಿ ಅವರನ್ನು ಚೂ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಬಿಜೆಪಿ ಅವಧಿಯಲ್ಲೇ ಅತಿಹೆಚ್ಚು ವಕ್ಫ್ ಬೋರ್ಡ್ ನೊಟೀಸ್ ಹೋಗಿದೆ. ಹೋರಾಟದ ಮೂಲಕ ಬಡ ರೈತರನ್ನ ಬಲಿಪಶು ಮಾಡೋಕೆ ಬಿಜೆಪಿ ಹೊರಟಿದೆ ಎಂದು ಕಿಡಿಕಾರಿದ್ದಾರೆ.