ಹುಬ್ಬಳ್ಳಿ: ಕೆಲವು ದಿನಗಳಿಂದ ನಗರದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಪಾಪು ಅವರ ಆರೋಗ್ಯ ವಿಚಾರಿಸಿದ್ದಾರೆ.
ಹಾಲಿ ಹಾಗೂ ಮಾಜಿ ಸಚಿವರಿಬ್ಬರು ಪಾಪು ಅವರ ಆರೋಗ್ಯದ ಬಗ್ಗೆ ಅವರ ಸಂಬಂಧಿಗಳು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಪಾಟೀಲ್ ಪುಟ್ಟಪ್ಪವರು ನಾಡಿನ ಹಿರಿಯ ಚಿಂತಕರು, ಅವರು ಬೇಗನೆ ಗುಣಮುಖರಾಗಿ ಮತ್ತೆ ಮೊದಲಿನಂತೆ ನೆಲ, ಜಲ ಹಾಗೂ ಕನ್ನಡಕ್ಕಾಗಿ ಅವರ ಹೋರಾಟ ಮುಂದುವರೆಸಲು ಎಂದು ಬಿ.ಸಿ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಹಾರೈಸಿದರು.
ಇದೇ ವೇಳೆ ಕೃಷಿ ಸಚಿವರು ಕಿಮ್ಸ್ ವೈದ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿ ಆರೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಂಡರು. ಬಳಿಕ ಪಾಪು ಅವರ ಆರ್ಶಿವಾದ ಪಡೆದರು. ಸಚಿವ ಬಿಸಿ ಪಾಟೀಲ್ ಜೊತೆ ಅವರ ಪುತ್ರಿ ಸೃಷ್ಠಿ ಪಾಟೀಲ್ ಸಹ ಪಾಪುರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.