ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳಿಂದಲೇ (Guarantee Scheme) ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತಿದೆ. ಪ್ರತಿ ವರ್ಷ ಸರ್ಕಾರದಿಂದ ಎಸ್ಕಾಂಗಳಿಗೆ (ESCOM) ಪಾವತಿಸಬೇಕಿದ್ದ ಹಣವನ್ನು ಜನರಿಂದಲೇ ಸಂಗ್ರಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಹೌದು. ಪ್ರತಿ ವರ್ಷ ಸರ್ಕಾರ ಎಸ್ಕಾಂಗಳಿಗೆ 1,602 ಕೋಟಿ ರೂ. ಸಬ್ಸಿಡಿ ಸರ್ಕಾರ ಪಾವತಿಸಬೇಕು. ಆದ್ರೆ ಇದು ಪಾವತಿಯಾಗದೇ ಇರುವುದರಿಂದ ಜನರಿಂದಲೇ ವಸೂಲಿಗೆ ಚೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಆದರೆ ನಿರ್ದೇಶನ ಕೊಡದ ಹೊರತು ಹಣ ವಸೂಲಿ ಮಾಡದಂತೆ ಕೆಇಆರ್ಸಿ (KERC) ಸೂಚಿಸಿದೆ. ಒಂದು ವೇಳೆ ಕೆಇಆರ್ಸಿ ಏನಾದರೂ ಸೂಚನೆ ಕೊಟ್ಟರೆ 1.79 ಕೋಟಿ ಗೃಹಜ್ಯೋತಿ (Gruhajyothi) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಲಿದೆ.
ಜನರಿಂದಲೇ ಗೃಹಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೊಡುವಂತೆ ಕೋರಿ ಚೆಸ್ಕಾಂ ಕೆಇಆರ್ಸಿಗೆ ಪತ್ರ ಬರೆದಿದೆ. ಕೆಇಆರ್ಸಿ ಆಕ್ಟ್ ಅಡಿ ಅವಕಾಶ ಕೊಡುವಂತೆ ಪತ್ರ ಬರೆಯಲಾಗಿದೆ. 2008ರ ಕೆಇಆರ್ಸಿ ಆಕ್ಟ್ ಅನ್ನು ಚೆಸ್ಕಾಂ ಪತ್ರದಲ್ಲಿ ಉಲ್ಲೇಖಿಸಿದೆ. ಸರ್ಕಾರ ಸಬ್ಸಿಡಿ ಕೊಡದೇ ಹೋದಲ್ಲಿ ಜನರಿಂದ ಅದನ್ನ ಪಾವತಿ ಮಾಡಿಸಿಕೊಳ್ಳಬೇಕು. ಇದಕ್ಕೆ ಕೆಇಆರ್ಸಿ ಖುದ್ದು ಅನುಮತಿ ಕೊಡಬೇಕು, ವಸೂಲಿಗೆ ನಿರ್ದೇಶನ ಕೊಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ ಕೆಇಆರ್ಸಿಯಿಂದ ವಿಚಾರಣೆ ಬಾಕಿ ಇದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಕೆಇಆರ್ಸಿ ನಿರ್ದೇಶನ ಕೊಡದ ಹೊರತು ಜನರಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವಂತಿಲ್ಲ.
ಕೆಇಆರ್ಸಿ ಚೆಸ್ಕಾಂ ಪ್ರಸ್ತಾಪ ಒಪ್ಪಿದ್ರೆ ಏನಾಗುತ್ತೆ?
* ಗೃಹಜ್ಯೋತಿ ಬಳಕೆದಾರರೇ ಮೊದಲು ಬಿಲ್ ಪಾವತಿಸಬೇಕಾಗುತ್ತದೆ.
* ಸದ್ಯ 1.71ಕೋಟಿ ಅರ್ಹರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ.
* ಇದರಲ್ಲಿ 1.65 ಕೋಟಿ ಕುಟುಂಬಗಳಿಗೆ ಶೂನ್ಯ ಬಿಲ್ ಬರುತ್ತಿದೆ.
* ಬೆಸ್ಕಾಂ ವ್ಯಾಪ್ತಿಯಲ್ಲೇ 70 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ.
* ಕೆಇಆರ್ಸಿ ಚೆಸ್ಕಾಂ ಪ್ರಸ್ತಾಪಕ್ಕೆ ಅವಕಾಶ ಕೊಟ್ಟರೆ ಎಲ್ಲಾ ಎಸ್ಕಾಂಗಳಿಗೂ ಇದು ಅನ್ವಯ ಆಗಲಿದೆ.
* ಈಗಾಗಲೇ ಸರ್ಕಾರ ಸಬ್ಸಿಡಿ ಹಣವನ್ನು ಮುಂಗಡವಾಗಿ ನೀಡುವ ಬದಲು ಎರಡು ತಿಂಗಳು ಬಾಕಿ ಉಳಿಸಿಕೊಳ್ಳುತ್ತಿದೆ.
* 2008ರ ಕೆಇಆರ್ಸಿ ನಿಯಮಗಳ ಪ್ರಕಾರ ಪರಿಗಣಿಸಿದರೆ ಅವಕಾಶ ಕೊಡಬೇಕಾಗಬಹುದು.
* ಆದರೆ ಇದೇ ತಿಂಗಳು 27ರಂದು ಕೆಇಆರ್ಸಿ ಅಂತಿಮ ಸಭೆ ಇದೆ.
* ಆ ಸಭೆಯಲ್ಲಿ ಏನು ತೀರ್ಮಾನ ಮಾಡುತ್ತೆ ಎಂಬುದರ ಮೇಲೆ ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಸಿಗುತ್ತಾ? ರಿಲೀಫ್ ಸಿಗುತ್ತಾ ಎಂದು ಗೊತ್ತಾಗಲಿದೆ.