-ಪ್ರಶ್ನಿಸಿದ ಪೊಲೀಸ್, ಎಇಇಗೆ ನಿಂದನೆ
ತುಮಕೂರು: ಹೇಮಾವತಿಯ ಎಸ್ಕೇಪ್ ಗೇಟನ್ನು ತೆಗೆಸಿ ಅದಕ್ಕೆ ಹಾನಿಯುಂಟು ಮಾಡಿ, ನೀರನ್ನ ಹರಿಸಿಕೊಳ್ಳುವುದರ ಮೂಲಕ ತುರುವೇಕೆರೆ ಜೆಡಿಎಸ್ನ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ಗೂಂಡಾವರ್ತನೆ ತೋರಿದ್ದಾರೆ.
ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಅವರು ಕುಣಿಗಲ್ಗೆ ನೀರು ಹರಿಯುವ ಮಾರ್ಗ ಮಧ್ಯದ ಡಿ.ಎಸ್.ಪಾಳ್ಯದಲ್ಲಿ ಗೇಟ್ ತೆರೆದು ನೀರು ಹರಿಸಿ ಗೂಂಡಾವರ್ತನೆ ಮೆರೆದಿದ್ದಾರೆ. ಈ ವೇಳೆ ಎಸ್ಕೇಪ್ ಗೇಟಿಗೆ ಹಾನಿ ಉಂಟಾಗಿದೆ.
ತಮ್ಮ ಬೆಂಬಲಿಗರ ಸಹಾಯದಿಂದ ಒಂದು ಅಡಿ ಮೇಲಕ್ಕೆ ಎಸ್ಕೇಪ್ ಗೇಟ್ ಎತ್ತಿಸಿ, ನೀರು ಹರಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಜಲಾಶಯದ ಎಇಇ ವಿಜಯಲಕ್ಷ್ಮೀ ಅವರು ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದರೂ ಲೆಕ್ಕಿಸದೆ, ಅಧಿಕಾರಿಯನ್ನು ನಿಂದಿಸಿ ಹೇಮಾವತಿ ನೀರು ಹರಿಸಿಕೊಂಡು ದರ್ಪ ತೋರಿದ್ದಾರೆ.
ಅಲ್ಲದೆ ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆಯೂ ವಾಗ್ದಾಳಿ ನಡೆಸಿ, ಯಾರ ಮಾತನ್ನು ಕೇಳದೆ ನೀರು ಹರಿಸಿಕೊಂಡಿದ್ದಾರೆ. ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಕೃಷ್ಣಪ್ಪ ಅವರು ನೀರು ಹರಿಸಿದ್ದಾರೆ.
ತುರುವೇಕೆರೆಯಲ್ಲಿ ಸದ್ಯ ಬಿಜೆಪಿಯ ಮಸಾಲ ಜಯರಾಮ್ ಶಾಸಕರಾಗಿದ್ದಾರೆ. ಆದರೆ ಜೆಡಿಎಸ್ನ ಮಾಜಿ ಶಾಸಕ ಈ ರೀತಿ ದರ್ಪ ಮೆರೆದಿರುವುದು ಬಿಜೆಪಿಯವರ ಕೆಂಗಣ್ಣಿಗೆ ಕಾರಣವಾಗಿದೆ.