ಲಕ್ನೋ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಗಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಅಲ್ಲಿನ ಜನರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಹಲವು ವರ್ಷಗಳಿಂದ ಭಯದಲ್ಲಿ ಬದುಕುತ್ತಿದ್ದ ಮತದಾರರು ಬದಲಾವಣೆ ಮತ್ತು ಅಭಿವೃದ್ಧಿಯನ್ನು ಬಯಸಿದ್ದಾರೆ. ಪಶ್ಚಿಮ ಬಂಗಾಳದ ಮತದಾರರು, ವಿಶೇಷವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ಬದಲಾವಣೆ ಬಯಸಿದ್ದಾರೆ. ಜೊತೆಗೆ ಪ್ರಮುಖ ಬೇಡಿಕೆಗಳನ್ನು ಹೊಂದಿದ್ದಾರೆ. ಇದೆಲ್ಲವನ್ನೂ ನಾನು ಗ್ರಹಿಸಿದ್ದೇನೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಂಗಾಳದ ತಾಯಿ ಕಣ್ಣೀರಿಡುತ್ತಿದ್ದಾಳೆ, ರಾಜ್ಯ ನುಸುಳುಕೋರರಿಂದ ತುಂಬಿದೆ, ಜನ ಭಯಭೀತರಾಗಿದ್ದಾರೆ: ಟಿಎಂಸಿ ವಿರುದ್ಧ ಮೋದಿ ವಾಗ್ದಾಳಿ
ತೃಣಮೂಲ ಕಾಂಗ್ರೆಸ್ ಅಡಿಯಲ್ಲಿ ಭಯದ ವಾತಾವರಣವಿದೆ ಅಂತ ಅದರಿಂದ ದೂರ ಸರಿದು ಜನರು ಉತ್ತಮ ಅವಕಾಶಗಳು, ಸುರಕ್ಷತೆ ಮತ್ತು ಅಭಿವೃದ್ಧಿಯನ್ನು ಹುಡುಕುತ್ತಿದ್ದಾರೆ. ಯುವಕರು ಮುಂದುವರಿಯಲು ಮುಕ್ತ ಅವಕಾಶಗಳನ್ನು ಬಯಸುತ್ತಾರೆ. ಹೆಣ್ಣುಮಕ್ಕಳು ಗೌರವ ಮತ್ತು ಸುರಕ್ಷತೆಯನ್ನು ಬಯಸುತ್ತಾರೆ. ಬಂಗಾಳದ ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಕುಟುಂಬವು ಬದಲಾವಣೆಯನ್ನು ಬಯಸುತ್ತದೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತದೆ. ಭಯದಲ್ಲಿ ಬದುಕುವುದು ಸಾಕು, ಈಗ ನಂಬಿಕೆ ಬೇಕು. ಈಗ ಬಂಗಾಳಕ್ಕೆ ಬಿಜೆಪಿ ಬೇಕು ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.
ಬಿಜೆಪಿಯ ದೀರ್ಘಕಾಲದ ‘ಅಭಿವೃದ್ಧಿ ಹೊಂದಿದ ಬಂಗಾಳ’ ಪ್ರಚಾರ ಯೋಜನೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಗುಂಪುಗಳ ಜನರು ಬೆಳವಣಿಗೆಯ ಆಕಾಂಕ್ಷೆಗಳಲ್ಲಿ ಒಂದಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯುವ ಶಕ್ತಿಯಾಗಿರಲಿ ಅಥವಾ ಮಹಿಳಾ ಶಕ್ತಿಯಾಗಿರಲಿ, ನಮ್ಮ ರೈತ ಸಹೋದರ ಸಹೋದರಿಯರೇ, ಕಾರ್ಮಿಕರೇ ಅಥವಾ ಉದ್ಯಮಿಗಳೇ, ಎಲ್ಲರೂ ‘ಅಭಿವೃದ್ಧಿ ಹೊಂದಿದ ಬಂಗಾಳ’ಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಮ್ಮ ಪ್ರಚಾರದ ಹಾದಿ ಕೇವಲ ರಾಜಕೀಯವಾಗಿರದೇ, ಆಧ್ಯಾತ್ಮಿಕ ಪ್ರಯಾಣದಂತೆ ಭಾಸವಾಯಿತು. ಜನರ ವಾತ್ಸಲ್ಯ ಮತ್ತು ಮಾ ಕಾಳಿಯ ಆಶೀರ್ವಾದ ನಮ್ಮ ಮೇಲಿದೆ. ಬಿಸಿ ಬಿಸಿಲು, ನಿರಂತರ ರ್ಯಾಲಿಗಳು ಮತ್ತು ರೋಡ್ ಶೋಗಳ ಹೊರತಾಗಿಯೂ, ಬಂಗಾಳ ಚುನಾವಣೆಗೆ ಪ್ರಚಾರ ಮಾಡುವಾಗ ನಾನು ಎಂದಿಗೂ ದಣಿದಿಲ್ಲ. ಈ ಚುನಾವಣೆ ಕೇವಲ ಪ್ರಚಾರವಲ್ಲ, ಆಧ್ಯಾತ್ಮಿಕ ಪ್ರಯಾಣ ಎಂದು ನನಗೆ ಅನಿಸಿತು ಎಂದಿದ್ದಾರೆ. ಇದನ್ನೂ ಓದಿ: White House Dinner Shooting | ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ

