– ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ
– ಮಗನ ಹೆಸರಲ್ಲಿ ಸ್ಮಾರಕಕ್ಕಾಗಿ ಒತ್ತಾಯ
ದಾವಣಗೆರೆ: ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ ದಾವಣಗೆರೆ ಹೊರ ವಲಯದಲ್ಲಿರುವ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.
ಲಿಖಿತ್ (22)ಸಾವನ್ನಪ್ಪಿದ ಎಂಜಿನಿಯರಿಂಗ್ ವಿದ್ಯಾರ್ಥಿ. ಲಿಖಿತ್ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದನು. ಇದೇ ತಿಂಗಳ 13ರಂದು ಲಿಖಿತ್ ಮೈದಾನದಲ್ಲಿ ಬೈಕಿನಲ್ಲಿ ಹೋಗುವಾಗ ಹಗ್ಗ ಕುತ್ತಿಗೆಗೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದಾನೆ.
ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ತಮ್ಮ ಮಗ ಲಿಖಿತ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಅಲ್ಲದೆ ಆಡಳಿತ ಮಂಡಳಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಪೋಷಕರ ಆಕ್ರೋಶ ನೋಡಿ ಆಡಳಿತ ಮಂಡಳಿ ಹಣ ಕೊಡುವುದಾಗಿ ಹೇಳಿದೆ. ಆದರೆ ಇದಕ್ಕೆ ಒಪ್ಪದ ಲಿಖಿತ್ ಪೋಷಕರು, ನಮಗೆ ಹಣ ಬೇಡ ಮಗನ ಹೆಸರಿನಲ್ಲಿ ಕಾಲೇಜಿನ ಒಳಗೆ ಸ್ಮಾರಕ ಭವನ ಕಟ್ಟುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಒಪ್ಪುತ್ತಿಲ್ಲ. ಹಾಗಾಗಿ ಲಿಖಿತ್ ಪೋಷಕರು ಕಾಲೇಜು ಮುಂಭಾಗ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.