ಬೆಂಗಳೂರು: ಹೈದರಾಬಾದ್ನಿಂದ ಆಗಮಿಸಿದ್ದ ಕಾಂಗ್ರೆಸ್ ಶಾಸಕರು ಕೆಜೆ ಜಾರ್ಜ್ ಒಡೆತನದ ಎಂಬೆಸಿ ಗಾಲ್ಫ್ ಬಿಸಿನೆಸ್ ಹೋಟೆಲ್ ನಲ್ಲಿ ತಂಗಿದ್ದರೆ, ಜೆಡಿಎಸ್ ಶಾಸಕರು ಲೆ ಮೆರಿಡಿಯನ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ಹೋಟೆಲ್ ನಲ್ಲಿ ಜೆಡಿಎಸ್ ತುರ್ತು ಸಭೆಯಲ್ಲಿ ಕರೆದಿದ್ದು, ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ನಾಯಕರ ಜೊತೆ ಮಾತನಾಡಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಬಸ್ ನಲ್ಲಿ ವಿಧಾನ ಸೌಧಕ್ಕೆ ಹೋಗೋಣ. ಯಾವುದೇ ಕಾರಣಕ್ಕೂ ಅಡ್ಡ ಮತದಾನಕ್ಕೆ ಅವಕಾಶವಿಲ್ಲ. ಸದನದಲ್ಲಿ ಗದ್ದಲ ಗಲಾಟೆ ಮಾಡದೇ ನಾವು ಬಹುಮತವನ್ನು ಸಾಬೀತು ಪಡಿಸೋಣ. ಬಿಜೆಪಿಯವರು ಸ್ವಲ್ಪ ಮಾತನಾಡಿ ರಾಜೀನಾಮೆ ಕೊಡುವುದಷ್ಟೆ ಅವರಿಗೆ ಉಳಿದಿರುವ ವಿಚಾರ ಎಂದು ಎಚ್ಡಿಕೆ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಧಾರವಾಡ ನವಲಗುಂದ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತಗೊಂಡ ಜೆಡಿಎಸ್ ಅಭ್ಯರ್ಥಿ ಕೋನರೆಡ್ಡಿ ಪ್ರತಿಕ್ರಿಯಿಸಿ, ಜೆಡಿಎಸ್ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ. ಯಾರೂ ಬಿಟ್ಟು ಹೋಗಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತ. ಯಾರೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ.