ಇಸ್ಲಾಮಾಬಾದ್/ವಾಷಿಂಗ್ಟನ್: ಜೈಶ್ ಎ ಮೊಹಮ್ಮದ್ (Jaish-e-Mohammed) ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಮೆರಿಕ ಸಂಸದ ಬ್ರಾಡ್ ಶೆರ್ಮನ್ (Brad Sherman) ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಅಲ್ಲದೇ ಜೈಶ್ ಸಂಘಟನೆಯ ನೀಚ ಕೃತ್ಯಗಳನ್ನು ಪಾಕಿಸ್ತಾನದ ಮಾಜಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
I emphasized to the Pakistani delegation the importance of combatting terrorism, and in particular, the group Jaish-e-Mohammed, who murdered my constituent Daniel Pearl in 2002. Pearl’s family continues to live in my district, and Pakistan should do all it can to eliminate this…
— Congressman Brad Sherman (@BradSherman) June 5, 2025
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನಿ ನಿಯೋಗವನ್ನು (Pakistani delegation) ವಾಷಿಂಗ್ಟನ್ನಲ್ಲಿ ಭೇಟಿಯಾದ ಶೆರ್ಮನ್, ಜೆಇಎಂನ ನೀಚ ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ನ ಪತ್ರಕರ್ತ ಡೇನಿಯಲ್ ಪರ್ಲ್ (Daniel Pearl) ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್ʼ ಸದಸ್ಯ ರಾಷ್ಟ್ರಗಳ ಬೆಂಬಲ
ಪಾಕ್ ಮುಖವಾಡ ಬಯಲು ಮಾಡಲು ಭಾರತ ಕಳುಹಿಸಿರುವ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ಸಹ ವಾಷಿಂಗ್ಟನ್ನಲ್ಲಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಪಾಕ್ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹಫೀಜ್ ಅಬ್ದುರ್ ರೌಫ್ ಉಗ್ರನಲ್ಲ, ಧರ್ಮಗುರು – ವಿಶ್ವಸಂಸ್ಥೆಯಲ್ಲಿ ಪಾಕ್ ಮಾಜಿ ಸಚಿವನ ಮೊಂಡುವಾದ
ಈ ನಡುವೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಬ್ರಾಡ್ ಶೆರ್ಮನ್, ಭಯೋತ್ಪಾದನೆ ವಿರುದ್ಧದ ಹೋರಾಟದ ಮಹತ್ವದನ್ನು ನಾನು ಪಾಕಿಸ್ತಾನಿ ನಿಯೋಗಕ್ಕೆ ತಿಳಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸೂಚಿಸಿದ್ದೇನೆ. 2002ರಲ್ಲಿ ಜೈಶ್ ಉಗ್ರರು ನನ್ನ ಕ್ಷೇತ್ರದ ನಿವಾಸಿಯೂ ಆಗಿರುವ ಪತ್ರಕರ್ತ ಡೇನಿಯಲ್ ಪರ್ಲ್ರನ್ನ ಹತ್ಯೆಗೈದಿದ್ದರು. ಅವರ ಕುಟುಂಬ ಇನ್ನೂ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದೆ. ಡೇನಿಯಲ್ ಪರ್ಲ್ ಅಪಹರಣ ಮತ್ತು ಕೊಲೆಯಲ್ಲಿ ಭಯೋತ್ಪಾದಕ ಒಮರ್ ಸಯೀದ್ ಶೇಖ್ ಶಿಕ್ಷೆಗೊಳಗಾಗಿದ್ದಾನೆ ಎಂದು ವಿವರಿಸಿದ್ದಾರೆ.
ಜೈಶ್ ಸಂಘಟನೆ ಪಾತ್ರ ಏನು?
ಜೈಶ್-ಎ-ಮೊಹಮ್ಮದ್ ಅನ್ನು ವಿಶ್ವಸಂಸ್ಥೆ ಈಗಾಗಲೇ ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. 2019ರ ಪುಲ್ವಾಮಾ ದಾಳಿಯಂತಹ ಅನೇಕ ದಾಳಿಗಳಿಗೆ ಈ ಸಂಘಟನೆ ಕಾರಣವಾಗಿದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಟ್ರಂಪ್ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್ ಕಂಪನಿಗಳಿಗೆ ಶಾಕ್!
ಅಲ್ಪಸಂಖ್ಯಾತರ ಬಗ್ಗೆ ಕಳವಳ
ಭಯೋತ್ಪಾದನೆಯ ನಿರ್ಮೂಲನೆ ಬಗ್ಗೆ ಬಲವಾದ ಸಂದೇಶ ನೀಡಿರುವ ಶೆರ್ಮನ್, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಅಹ್ಮದೀಯ ಮುಸ್ಲಿಮರು ತಮ್ಮ ನಂಬಿಕೆಯನ್ನು ಆಚರಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಯವಿಲ್ಲದಂತೆ ಸ್ವತಂತ್ರರಾಗಿರುವಂತೆ ನೋಡಿಕೊಳ್ಳಬೇಕು ಅಂತಲೂ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್ ಸಚಿವ ಇಶಾಕ್ ದಾರ್