ಕೊಲ್ಕತ್ತಾ: ಆನೆಯ ಫೋಟೋ ತೆಗೆದುಕೊಳ್ಳಲು ವಾಹನದಿಂದ ಹೊರಬಂದು ಅದರಿಂದಲೇ ತುಳಿಸಿಕೊಂಡು ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಬಂಗಾಳದ ಹೆದ್ದಾರಿಯಲ್ಲಿ ನಡೆದಿದೆ.
ಜಾಲ್ಪೈಗುರಿ ಜಿಲ್ಲೆಯಲ್ಲಿರುವ ಲಟಗುರಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಸುಮಾರು 5 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಆನೆಯೊಂದು ಹಾದುಹೋಗುವಾಗ ಈ ಅವಘಡ ಸಂಭವಿಸಿದೆ.
ಜಾಲ್ಪೈಗುರಿಯ ಬ್ಯಾಂಕ್ವೊಂದಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಧಿಕ್ ರೆಹಮಾನ್ (40) ಮೃತ ದುರ್ದೈವಿ. ಇವರು ಕೆಲಸಕ್ಕೆ ಹೋಗುವಾಗ ದಾರಿ ಮಧ್ಯೆ ಬಂದ ಆನೆಯ ಫೋಟೋ ತೆಗೆಯಲು ತಮ್ಮ ಕಾರಿನಿಂದ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಆನೆ ಏಕಾ ಏಕಿ ಸಾಧಿಕ್ ಮೇಲೆ ದಾಳಿ ಮಾಡಿದೆ.
ಆನೆ ಸಾಧಿಕ್ ಅವರ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿದ್ದ ಸಾರ್ವನಿಕರು ಏನೂ ಮಾಡಲು ಸಾಧ್ಯವಾಗದೇ ಅಸಹಾಯಕರಾಗಿ ನೋಡುತ್ತ ನಿಂತಿದ್ದರು. 15 ನಿಮಿಷಗಳ ನಂತರ ಆನೆ ಕಾಡಿನೊಳಗೆ ಹೋಗಿದೆ. ಆದರೆ ಸಾಧಿಕ್ ಅವರಿಗೆ ಗಂಭೀರವಾಗಿ ಗಾಯಾಗಳಾಗಿದ್ದರಿಂದ ಸ್ಥಳದ್ಲಲಿಯೇ ಮೃತಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ಆನೆಗಳು ಸಾಮಾನ್ಯವಾಗಿದ್ದು, ಪ್ರತಿದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ವಾಹನದಿಂದ ಯಾರೂ ಇಳಿಯುವುದಿಲ್ಲ. ಆದ್ರೆ ಸಾಧಿಕ್ ಆನೆಯ ಬಳಿ ಹೋಗುವ ಧೈರ್ಯ ಮಾಡಿ ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಜ್ಯ ಅರಣ್ಯ ಇಲಾಖೆಯ ದಾಖಲಾತಿ ಪ್ರಕಾರ ಕಳೆದ ವರ್ಷ ಮಾನವ-ಆನೆಗಳ ಸಂಘರ್ಷದಿಂದ ಸುಮಾರು 84 ಜನರು ಮೃತಪಟ್ಟಿದ್ದಾರೆ. ಹಲವು ಆನೆಗಳು ರೈಲಿಗೆ ಸಿಲುಕಿ ಸಾವನ್ನಪ್ಪಿವೆ.