ಹಾಸನ: ಮಲೆನಾಡು ಭಾಗದಲ್ಲಿ ಒಂಟಿ ಸಲಗದ ಉಪಟಳ ಹೆಚ್ಚಾಗಿದ್ದು, ಬೆಳ್ಳಂಬೆಳಗ್ಗೆ ಮನೆ ಮುಂದೆ ಬಂದು ನಿಂತ ಒಂಟಿ ಸಲಗ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಇಂದು ಬೆಳಗ್ಗೆ ಗ್ರಾಮದೊಳಗೆ ಕಾಡಾನೆ ಬಂದು ಮನೆಯೊಂದರ ಬಾಗಿಲ ಮುಂದೆಯೇ ನಿಂತಿದೆ. ಕಾಡಾನೆ ಕಂಡು ಮನೆಯವರು ಮತ್ತು ಗ್ರಾಮಸ್ಥರು ಆತಂಕಕ್ಕೀಡಾಗಿ ಮನೆಯೊಳಗೆ ಕೆಲ ಕಾಲ ಉಳಿದಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ
ಈ ರೀತಿಯಾಗುತ್ತಿರುವುದು ಮೊದಲಲ್ಲ. ಕಳೆದ ಒಂದು ವಾರದಿಂದ ಈ ಒಂಟಿ ಸಲಗ ಜನನಿಬಿಡ ಪ್ರದೇಶದಲ್ಲಿಯೇ ಸಂಚರಿಸುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಅದು ಅಲ್ಲದೇ ಈ ಭಾಗದಲ್ಲಿ ಪ್ರತಿದಿನ ಒಂದಿಲ್ಲ ಒಂದು ರೀತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕೆಲವೊಮ್ಮೆ 20ಕ್ಕೂ ಹೆಚ್ಚು ಆನೆಗಳು ಜಮೀನಿಗೆ ದಾಳಿ ಮಾಡಿ ಕಾಫಿ, ಭತ್ತ, ಜೋಳ ಸೇರಿದಂತೆ ಇನ್ನಿತರ ಬೆಳೆ ನಾಶ ಮಾಡುತ್ತಿವೆ.
ಆನೆ ದಾಳಿಯಿಂದ ಕಷ್ಟಪಟ್ಟು ಬೆಳೆದ ಫಸಲು ಕೈ ಸೇರುತ್ತಿಲ್ಲ. ಮತ್ತೊಂದೆಡೆ ಜೀವ ಭಯದಲ್ಲೇ ದಿನದೂಡಬೇಕಾಗಿದೆ. ಅಧಿಕಾರಿಗಳಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.